Saturday, December 11, 2010

ಮಹಾಪ್ರಯಾಣ- ಮೈಸೂರ್ ಬಸ್ಸಿನಲ್ಲಿ ಕ್ಯಾಚ್ ಕ್ಯಾಚ್..

http://enoondu.blogspot.com/

ಐದೂವರೆಗೆಲ್ಲಾ ಮೆಜೆಸ್ಟಿಕ್ ನಲ್ಲಿ ಇರ್ತೇನೆ ಎಂದು ಫೋನು ಮಾಡಿದವರಿಗೆಲ್ಲಾ ಭರವಸೆ ಕೊಟ್ಟು, ನಾಲ್ಕೂವರೆಗೆ ಆಫೀಸು ಬಿಡುವಾಗಲೇ ಗೊತ್ತಾಗಿತ್ತು - ಐದೂ ವರೆಗೆ ಸಾಧ್ಯವೇ ಇಲ್ಲ ಎಂದು. ಶುಕ್ರವಾರ, ಸಂಜೆ ಹೊತ್ತು , ದಸರಾ ಬೇರೆ.. ವಿನ್ನಿಗೆ ಫೋನಾಯಿಸಿದೆ.

"ಲೇ ಮೈಸೂರಿಗೆ ಬಸ್ ಸಿಗದೇ ಇದ್ರೆ ಏನೋ ಮಾಡೋದು?" ಅಂದೆ.

ಬಯ್ದ- "ರಿಸರ್ವೇಶನ್ ಮಾಡಬೇಕಿತ್ತು.. ನಾ ಮೊದ್ಲೇ ಹೇಳ್ದೆ.. ಈಗ ಹೊರಟ ಮೇಲೆ ಆಗೋಯ್ತು.. ನಡ್ಕೊಂಡಾದ್ರೂ ಮೈಸೂರಿಗೆ ಹೋಗೋದೆ" ಅಂದ.

"ಎಲ್ಲಿದ್ದೀಯಾ" ಕೇಳಿದೆ.. ಅವನು ನಾಲ್ಕೂ- ನಾಲ್ಕೂ ವರೆಗೆಲ್ಲಾ ಹೊರಡೋ ಪ್ಲಾನ್ ಮಾಡಿದ್ದ. ನಾನೇ ಕೆಲಸ ಅದೂ ಇದೂ ಎಂದು ಐದೂವರೆಗೆ ಮುಂದೂಡಿದ್ದೆ.

"ಮತ್ತೀಕೆರೆಲ್ಲಿ" ಅಂದ..

"ಥೂ ನಿನ್ನ.. ನಾನೇ ಲೇಟು ಅಂದ್ರೆ ನೀ ಇನ್ನೂ ಮತ್ತೀಕೆರೆಲ್ಲಿ ಇದ್ದೀಯಾ .. ಕೆರೆಲ್ಲಿ ಬಿದ್ ಸಾಯಿ " ಎಂದು ಫೋನಿಟ್ಟೆ.

ಫೋರಂ ವರೆಗೆ ಆಫೀಸು ಬಸ್ಸಲ್ಲೇ ಬಂದು ಅಲ್ಲಿಂದ ಬಿ.ಎಂ.ಟಿ.ಸಿ ವೋಲ್ವೋ ಹತ್ತಿ ಮೆಜೆಸ್ಟಿಕ್ ತಲುಪೋ ಹೊತ್ತಿಗೆ ಆರುಗಂಟೆ. ಸ್ವಲ್ಪ ಕತ್ತಲಾಗಿತ್ತು. ಮೆಜೆಸ್ಟಿಕ್ಕಿನ ನಿಲ್ದಾಣದ ಮೇಲೆ ಹಾರುತ್ತಿದ್ದ ದಸರಾ ಜಾಹೀರಾತಿನ ಬಲೂನನ್ನು ನೋಡಿ ಫೋಟೊ ತೆಗೆಯಲು ಇಲ್ಲಿಂದಲೇ ಶುರು ಮಾಡೋಣ ಅನಿಸಿದರೂ ಜನ ಜಾಸ್ತಿ ಅಂತ ಬಿಟ್ಟೆ.

ಕೆ.ಎಸ್.ಆರ್.ಟಿ.ಸಿ ಬಸ್ ಸ್ಟಾಂಡಿನ ಮೈಸೂರು-ಬೆಂಗಳೂರು ರಿಸರ್ವೇಶನ್ ಕೌಂಟರ್ ಮುಂದಿನ ಕ್ಯೂದಲ್ಲಿ ವಿನ್ನಿ ನಿಂತಿದ್ದ. ಸಚಿನ್ ಅವನ ಪಕ್ಕ ನಿಂತು ಎನೋ ಮಾತಾಡುತ್ತಿದ್ದ.

"ಮೈಸೂರಿಗೆಲ್ಲಾ ರಿಸರ್ವೇಶನ್ ಬೇಕಾಗಲ್ಲ.. ಈಗದು ಹೆಚ್ಚು ಕಡಿಮೆ ಬೆಂಗಳೂರಿಗೇ ಸೇರಿ ಹೋಗಿದೆ" ಎಂದು ಅವರಿಬ್ಬರನ್ನೂ ಕ್ಯೂನಿಂದ ಎಳೆದು, ಮುಂದೆ ನಿಂತಿದ್ದ ಹಸಿರು ಬಣ್ಣದ ಶೀತಲ್ ಬಸ್ಸಿನಲ್ಲಿ ಕೊನೆಯ ಸೀಟಿನ ಮುಂದಿನ ಮೂವರ ಸೀಟಿನಲ್ಲಿ ತಳವೂರುವ ಹೊತ್ತಿಗೆ ಅರೂವರೆ. ಇದು ಆರಂಭ. ಏನು ಎತ್ತ ಎಲ್ಲಿ ಯಾವಾಗ ಎಂದು ಏನನ್ನೂ ಯೋಚಿಸದೆ ಮೂವರೂ ಮೈಸೂರಿಗೆ ಅದರಲ್ಲೂ ದಸರಾಗೆ ಹೊರಟದ್ದು ಅಲ್ಲಿಗೆ ನಿಜವಾಯಿತು.. ಹಿಂದಿನ ವಾರವಷ್ಟೇ ಬೇಲೂರು ಹಳೆಬೀಡನ್ನು ಒಂಟಿಯಾಗಿ ( ಒಂಟಿ ಸಲಗದಂತೆ ) ಸಂದರ್ಶಿಸಿ ಬಂದಿದ್ದ ನಾನು ಹೋಗುವುದು ಬೇಡ ಎಂದೇ ಅಂದುಕೊಂಡಿದ್ದೆ. ಮೊದಲು ವಿನ್ನಿ ಸಹ ’ಹೂಂ’ ಅಂದಿರಲಿಲ್ಲ. ಸಚಿನ್ ಮಾತ್ರ ’ಹೋಗೋಣ ಬನ್ರೋ.. ಹೋಗೋಣ ಬನ್ರೋ..’ ಅಂತಲೇ ಇದ್ದ.ಯಾವುದೋ ಮುಹೂರ್ತದಲ್ಲಿ ’ಹೂಂ’ ಅಂದದ್ದೇ ಈ ಹೊತ್ತಿನ ಈ ಮಹಾಪ್ರಯಾಣಕ್ಕೆ ಕಾರಣವಾಗಿತ್ತು.

***
ಹಿಂದಿನ ಸೀಟಿನಲ್ಲಿ ಯಾರೋ ಲೇಯ್ಸ್ ತಿನ್ನುತ್ತಿದ್ದರು ಎನ್ನುವುದು ಇಡೀ ಬಸ್ಸಿಗೆ ಗೊತ್ತಾಗುತ್ತಿದ್ದುದು ಅದರ ವಾಸನೆ (ಪರಿಮಳ?)ಯಿಂದ. "ಲೇಸಾಗಿ ಕಾಯುವ ನಮ್ಮಾದಿಕೇಶವರಾಯ" ಎಂದು ಪನ್ (pun) ಮಾಡಿದೆ. ನನ್ನ ಮತ್ತು ವಿನ್ನಿಯ ಮಧ್ಯೆ ಕೊತ ಸಚಿನ್ನನನ್ನು ಯಾವುದೋ ಸಬೂಬು ನೀಡಿ ದಾರಿ ಬದಿಯ ಸೀಟಿಗೆ ವರ್ಗಾಯಿಸಲಾಯಿತು. ಯಾವುದೋ ಹಳೇ ಚಡ್ಡಿ ದೋಸ್ತರುಗಳು ಸಿಕ್ಕಾಗ ಮಾತಾಡುವಂತೆ ನಾನು ವಿನ್ನಿ ಮಾತಾಡುತ್ತಾ ಕೂತದ್ದು ಸಚಿನ್ನನ ಗಮನಕ್ಕೆ ಬರದಿದ್ದರೂ, ಅವನ ಗುಣ ಗೊತ್ತಿದ್ದ ನಮ್ಗೆ ಆಶ್ಛರ್ಯವೆನಿಸಲಿಲ್ಲ. ಅವನು ತನ್ನಷ್ಟಕ್ಕೆ ತಾನು ಫೋನು ತೆಗೆದು "ವಿ ಜಸ್ಟ್ ಲೆಫ್ಟ್.. ಹೆವೀ ಟ್ರಾಫಿಕ್ ಹಿಯರ್.." ಅಂತ ಮೈಸೂರಿಗೆ ಇಂಗ್ಲಿಷ್ ಒಯ್ಯುವ ದೂತನಂತೆ ಮಾತಾಡುತ್ತಿದ್ದ. ಫೋನಿಟ್ಟ ಮೇಲೆ ವಿನ್ನಿ ಕೇಳಿದ ’ಈ ಮೇಲ್ ಕಳಿಸಬಹುದಿತ್ತು’ .. ಅದಕೆ ಸಚಿನ್ ’ಕಳುಹಿಸಿಯೇ ಬಂದಿದ್ದೇನೆ’ ಅಂದ. ನಾವು ಸುಮ್ಮನೆ ಮುಖ ಮುಖ ನೋಡಿಕೊಂಡೆವು.ಸಚಿನ್ನನೇ ಟಿಕೆಟ್ ತೆಗೆಸಿದ.. ಬರುವಾಗ ತನ್ನದು ಎಂದು ವಿನ್ನಿ ಆಗಲೇ ಡಿಕ್ಲೇರ್ ಮಾಡಿದ. ಮಧ್ಯಾಹ್ನದಿಂದ ಏನೂ ತಿನ್ನದ ನನಗೆ ಹಸಿವಾಗತೊಡಗಿತ್ತು. ಅದೇ ಯೋಚನೆಯಲ್ಲಿ ಕಿಟಕಿಯ ಹೊರಗೆ ಇಣುಕಿದೆ.

ಜಯಂತ ಕಾಯ್ಕಿಣಿ, ಯೋಗರಾಜ ಭಟ್ಟ, ಜಾಕಿ ಜಾಕಿ.. ಇತ್ಯಾದಿಗಳ ಬಗ್ಗೆ ಮಾತಾಡುತ್ತಿರುವಾಗಲೇ ಬಸ್ಸು ಚಾಮರಾಜ ಪೇಟೆ ಮಾರ್ಗವಾಗಿ ಮೈಸೂರು ರೋಡಿಗೆ ಚಕ್ರಾರ್ಪಣೆ ಮಾಡಿತ್ತು. ಸಚಿನ್ ಮಾತ್ರ ತನ್ನ ಕಿವಿಗೆ ear phone ಸಿಕ್ಕಿಸಿಕೊಂಡು ಹಾಡು ಕೇಳತೊಡಗಿದ್ದ. ಆರ್ಯ-2 ಚಿತ್ರದ ಯಾವುದೋ ಹಾಡಿದ್ದರೆ ಬ್ಲೂಟೂತಿನಲ್ಲಿ ಟ್ರಾನ್ಸ್ ಫರ್ ಮಾಡ್ರೋ ಅಂದ.. ನಾವಿಬ್ಬರೂ ಇಲ್ಲ ಅಂದೆವು. ಮತ್ತೆ ear-phoneನಲ್ಲಿ ತಲ್ಲೀನನಾದ. ಹಿಂದಿನವಾರದ ಶ್ರವಣಬೆಳಗೊಳ, ಬೇಲೂರು, ಹಳೆಬೀಡೀನ ಕಥಾನಕದ ವರ್ಣನೆಯ ಸಂದರ್ಭದಲ್ಲಿ ಒಂದು ಬೋರ್ಡು ಕಂಡೆ. ಈ ಮಹಾನಗರ ಪಾಲಿಕೆಯವರು ಚಿತ್ರ ಬಿಡಿಸಿಟ್ಟಿದ್ದಾರಲ್ಲ.. ಅದರಲ್ಲಿ.. ಬೇಲೂರು ಶಿಲ್ಪದ ಚಿತ್ರದ ಮೇಲೆ ದೊಡ್ಡದಾಗಿ ’ಬೇಲೂರು ಶಿಲಾಬಾಲಕಿ’ ಎಂದು ಬರೆದಿತ್ತು. .. ವಿನ್ನಿ ಶಾಲಾಬಾಲಕಿ ಎಂದು ಬರೆದಿಲ್ಲವಲ್ಲ ಎಂದು ಪನ್ ಮಾಡಿದ. ಸಚಿನ್ನನೂ ನಕ್ಕ. ಬಾಲಕಿಗೂ ಬಾಲಿಕೆಗೂ ಜಾಸ್ತಿ ವ್ಯತ್ಯಾಸವಿರದಿದ್ದರೂ ಬೋರ್ಡಿನ ತಲೆಬರಹ ವಿಚಿತ್ರವಾಗಿ ಕಂಡಿತ್ತು. ಇದೇ ತರಹ ಕಿಸಿಪಿಸಿ ಮಾಡುತ್ತಿರುವಾಗಲೇ ನನಗೊಂದು ವಿಚಿತ್ರ ಪ್ರಶ್ನೆ ಹೊಳೆದಿತ್ತು.

"ಏಲ್ಲಾ ಕಡೆ ’ಶ್ರೀ ದುರ್ಗಾಪರಮೇಶ್ವರಿ’ , ’ಶ್ರೀ ಚಾಮುಂಡೇಶ್ವರಿ’ ಅಂತೆಲ್ಲಾ ಬರೆದಿರ್ತಾರಲ್ಲ.. ಅದು ’ಶ್ರೀಮತಿ ದುರ್ಗಾಪರಮೇಶ್ವರಿ’ ಯಾಕಲ್ಲ?!" ಎಂದು ಕೇಳಿದೆ.

ವಿನ್ನಿ ದಿಗ್ಭ್ರಮೆಯಾದಂತೆ ಮುಖ ಮಾಡಿದ. ಆಮೇಲೆ ’ಥೂ.. ’ ಎಂದು ಉಗಿದ.. ’ಹೇಳುವುದಕ್ಕೂ ಕೇಳುವುದಕ್ಕೂ ಇದು ಸಮಯವಲ್ಲ’ ಎಂದು ತಪ್ಪಿಸಿಕೊಂಡ. ಸಚಿನ್ ಮಂದಹಾಸ ಬೀರುತ್ತಿದ್ದ.

ಇದಾದ ಮೇಲೆ ನಾನೇ ಬರೆದ ಒಂದು ಹಾಡೀನ ತರಹದ ರಚನೆಯೊಂದನ್ನು ಓದಿ ಕೇಳಿಸಿದೆ. ವಿನ್ನಿ ಚೆನ್ನಾಗಿದೆ ಅಂದ. ಸಚಿನ್ ಪ್ರತಿಕ್ರಿಯೆ ಇರಲಿಲ್ಲ. ಮತ್ತೆ ’ಕರೆಂಟು ಹೋಗಿದೆ !’ ಕವನ ಓದಲು ಕೊಟ್ಟೆ. ವಿನ್ನಿಗೆ ಇಷ್ಟವಾಯಿತು ಅಂತ ಕಣುತ್ತದೆ. ’ಇಂತದ್ನೆಲ್ಲಾ ಬಿಟ್ಟು ಬ್ಲಾಗಲ್ಲಿ ಏನೇನೋ ತುಂಬಿಸಿಟ್ಟಿದ್ದೀಯಾ’ ಎಂದ. ಕೊನೆಯಲ್ಲಿದ್ದ ’ಕರೆಂಟು ಹೋಗಿದೆ! ಎಲ್ಲಿಗೆ?’ ಎಂಬ ಪ್ರಶ್ನೆ ಆ ಕ್ಷಣಕ್ಕೆ ಇಬ್ಬರಿಗೂ ಕಾಡಿದ್ದನ್ನು ಅವರವರ ಮುಖದಲ್ಲಿ ಕಂಡ ನನಗೆ ಖುಷಿಯಾಯಿತು.

ಹೀಗೆ ಸಾಹಿತ್ಯದ ಚರ್ಚೆ ಮಾಡುತ್ತಲೇ ಬ್ಯಾಗ್ನಲ್ಲಿದ್ದ ಸುರೇಂದ್ರನಾಥರು ನೆನಪಾದರು. ಹೊಸ ವಿನ್ಯಾಸದ ಛಂದ ಪ್ರಕಾಶನದ ಕಟ್ಟುಕಥೆಗಳು ಎಂಬ ಚಂದದ ಪುಸ್ತಕದಲ್ಲಿ ಸುರೇಂದ್ರನಾಥರು ವಿಡಂಬನಾತ್ಮಕವಾಗಿ ನ್ಯೂನ್ಯತೆಗಳನ್ನೇ ದೊಡ್ಡದು ಮಾಡಿ ಹೆಣೆದಿದ್ದ ಕಥೆಗಳವು. ನಾನು ಪುಸ್ತಕ ತೆಗೆದು ಓದಲು ಶುರುಮಾಡಿಬಿಟ್ಟೆ.. ದೊಡ್ಡ ಧ್ವನಿಯಲ್ಲಿ... ಇಬ್ಬರೂ ಕೇಳುತ್ತಿದ್ದರು. ಅದರಲ್ಲಿನ ರಾಮ,ಪರ್ಣಕುಟೀರದ ಸೀತೆ, ಅನುಜ ಲಕ್ಷ್ಮಣ, ಬೇಕೆಂದರೂ ಬೀಳಲಾಗದ ಬಾತರೂಮ್ನಲ್ಲಿ ಬಿದ್ದ ಕಮಲಮ್ಮ, ಗೋಡೆಗೆ ತಾಗಿನಿಂತ ಪೀತಾಂಬರಧಾರಿ ನೀಲಿಬಣ್ಣದ ಕೊಲ್ಲೂರಯ್ಯ ಇತ್ಯದಿಗಳ ಸಂದರ್ಭದಲ್ಲಿ ಪುಸ್ತಕ ಮುಚ್ಚಿಟ್ಟು, ನಕ್ಕು, ಪುನಃ ಮುಂದುವರೆಸುತ್ತಿದ್ದೆವು. ಜೋರಾಗಿ ಓದಲಾಗದ ಶಬ್ದಗಳನ್ನು ಮನಸಲ್ಲೇ ಓದಿದರೂ, ಒಮ್ಮೊಮ್ಮೆ ಅದರ ಅರ್ಥ ವ್ಯಾಪ್ತಿಗೆ ಅದೇ ಶಬ್ದ ಬೇಕಾದಾಗ ಅವರಿಗೇ ಓದಲು ಕೊಡುತ್ತಿದ್ದೆ. ಕಥೆಯ ಕೊನೆಯ ಪುಟದಲ್ಲಿದ್ದಾಗ ಡ್ರೈವರ್ ಲೈಟ್ ಆರಿಸಿದ. ಮೊಬೈಲ್ ಬೆಳಕು ಬಿಟ್ಟೂ ಓದಿ ಮುಗಿಸಿದರೂ ಮುಗಿಸಿದ ಸ್ವಲ್ಪ ಸಮಯದವರೆಗೂ ಕಥೆಯ ಗುಂಗಿನಲ್ಲಿ ನಗುತ್ತಲೇ ಇದ್ದೆವು.

***

ಎರಡು ಕಿವಿಗೆರಡು ear phone ಸಿಕ್ಕಿಸಿ ಕೊತಾಗ ಹಸಿವಾದದ್ದು ನೆನಪಾಯಿತು. ಅಷ್ಟರಲ್ಲಿ ’ನಮ್ಮ ಕಾಲೇಜು ನಮ್ಮ ಕಾಲೇಜು’ ಎಂದು ಸಚಿನ್ ಎದ್ದೆದ್ದು ಆರ್.ವಿ. ಕಾಲೆಜು ಬೋರ್ಡ್ ನೋಡತೊಡಗಿದ. ಇನ್ನೂ ಹಾಗೇ ಇದೆ - ನೀಲಿ ಬಣ್ಣದ ಬೋರ್ಡು.. ಮಧ್ಯದಲ್ಲಿ ಕೆಂಬಣ್ಣದ G .. ಖುಷಿಯಾಯಿತೋ ಬೇಜಾರಾಯಿತೋ ತಿಳಿಯದ ಹಾಗೆ ಮುಖ ಮಡಿ ನಾವು ಸುಮ್ಮನಾದೆವು. ಬ್ಲೂ ಟೂತಿನಿಂದ ಕೆಲ ಹಾಡುಗಳ ಬದಲಾವಣೆ ನಡೆಯಿತು. ಹಸಿವು ಜೋರಾಗುತ್ತಿತ್ತು.. ಹಿಂದಿನ ಸಲವೊಮ್ಮೆ ಶ್ರೀನಿಧಿ ಜೊತೆಗೆ ಬಂದಿದ್ದಾಗ ಮದ್ದೂರಿನಲ್ಲಿ ತಿಂಡಿಗೆ ನಿಲ್ಲಿಸದ್ದು ನೆನಪಾಗಿ, ಅದನ್ನು ಹೇಳಿ ಹಸಿವಾದವರಿಗೆಲ್ಲಾ ಖುಷಿ ಸುದ್ದಿ ಕೊಟ್ಟೆ. ಹೀಗಾಗಿ ಮದ್ದೂರಿಗಾಗಿ ಕಾಯುತ್ತಾ ಹಸಿವನ್ನು ಮರೆಯುತ್ತಾ ಕತ್ತಲ ಗಾಳಿಗೆ ಮುಖವೊಡ್ಡಿ ಕುಳಿತೆವು.. ನನ್ನ ಕಿವಿಯಲ್ಲಿ ಕಾಯ್ಕಿಣಿ ಹಾಡು..

ಪ್ರೀತಿ ಸುಂದರ ಪ್ರೀತಿ ಸಂಭ್ರಮ ನವಿರು ನೆನಪುಗಳ ಕರೆಯೋಲೆ
ಪ್ರೀತಿ ಚಂಚಲ ಪ್ರೀತಿ ವಂಚನೆ ಕಣ್ಣ ಹನಿಗಳೇ ಜಪಮಾಲೆ..

***

’ಕ್ಯಾಚ್ ಹಾಕಿ ಕ್ಯಾಚ್ ಹಾಕಿ’

ಇದೇನಪ್ಪಾ ಇದ್ಯಾರು ಬಸ್ ನಲ್ಲಿ ಕ್ರಿಕೆಟ್ ಆಡ್ತಾ ಇರೋದು ಅಂತ ಕತ್ತು ತಿರುಗಿಸಿದರೆ ವಿನ್ನಿ. ಒಂಥರಾ ಮುಖ ಮಾಡಿ ಕಣ್ಣಗಲಿಸಿ ’ಅಲ್ನೋಡ್ರೋ ಅಲ್ನೋಡ್ರೋ’ ಎಂದು ಒದರುತ್ತಿದ್ದ. ಏನಪ್ಪಾ ಇದು ಅಂತ ನೋಡಿದರೆ ಪಕ್ಕದ ಸೀಟಿನಲ್ಲಿ ಯುವ ಜೋಡಿ.. ಸೊಂಟಕ್ಕೆ ಸೊಂಟ ಜೋಡಿಸಿ ಗುಸು ಗುಸುವಿನಲ್ಲಿ ಮಗ್ನ.. ಇದನ್ನು ನೋಡಿಯೇ ನಾಚಿಕೆ ಭರಿತ ಉನ್ಮಾದದಲ್ಲಿ ಕ್ಯಾಚ್ ಕ್ಯಾಚ್ ಅಂತ ಕೂಗಿಕೊಂಡಿದ್ದ ನಮ್ಮ ’ಸಂತ’ ವಿನ್ನಿ. ಕೂಗು ನಾವು ಮೂವರನ್ನು ದಾಟಿ ಮುಂದೆ ಹೋಗದಿದ್ದರೂ ಸ್ವಲ್ಪ ಜೋರಾಗಿಯೇ ಇತ್ತು.. ಮುಂದಿನ ಸೀಟಿನಲ್ಲೂ ಅದೇ ಹಣೆಬರಹ.. ಅವರ ಭಂಗಿ ನೋಡಿ ಅಸಹ್ಯದ ಭಾವನೆ ಹುಟ್ಟಿ ಕಣ್ಣನ್ನು ವಿನ್ನಿ ಕಡೆ ತಿರುಗಿಸಿದೆ.. ಇನ್ನೂ ಅಸಹ್ಯ ಅನಿಸ್ತು.. ಜೊಲ್ಲು ಸುರಿಸುವುದೊಂದು ಬಾಕಿ.. ಕಾಲೇಜಿನಲ್ಲೆಲ್ಲಾ ಈ ರೀತಿಯ ವಿಚಾರಗಳಲ್ಲಿ ಆಸಕ್ತಿ ತೋರಿಸದಿದ್ದರೂ, ಅವನ ಮನಸ್ಸು ಮಾತ್ರ ಒಮ್ಮೊಮ್ಮೆ ಅತಿಯೋಗಿಯಂತೆಯೂ ಇನ್ನೊಮ್ಮೆ ಅತಿಭೋಗಿಯಂತೆಯೂ ಫೋಸು ಕೊಡುತ್ತಾ ಯಾರಿಗೂ ಅರ್ಥವಾಗದ ರೀತಿಯಲ್ಲಿ ಒದ್ದಾಡುತ್ತಿತ್ತು ಎಂಬುದು ಗೊತ್ತಾಗುತ್ತಿತ್ತು. ಆದರೆ ಅದರ ಪರಿಸ್ಥಿತಿ ಈಗ ಈ ಮಟ್ಟಕ್ಕೆ ತಲುಪಿದೆ ಎನ್ನುವುದು ಕಳವಳಕ್ಕೆ ಕಾರಣವಾದ ವಿಚಾರ. ಸಚಿನ್ ಮಾತ್ರ ’ಛೆ ಛೆ ಇವರಿಗೆ ಸ್ವಲ್ಪನೂ ನಾಚಿಕೆ ಇಲ್ಲಾ. ಪಬ್ಲಿಕ್ ಪ್ಲೇಸ್ನಲ್ಲಿ.. ಈ ತರಹ.. ’ ಅನ್ನುತ್ತಲೇ ಆಗಾಗ ಅವರ ಕಡೆ ಕಣ್ಣು ಹರಿಬಿಡುತ್ತಿದ್ದ.. ನಾನು ಇದೆಲ್ಲಾ ಕಾಮನ್ನು ಎಂಬಂತೆ ಫೋಸು ಕೊಡುತ್ತಾ ಮನಸ್ಸಲ್ಲೇ ಸಂಡಿಗೆ(??) ಮೆಲ್ಲುತ್ತಿದ್ದೆ.. (ಇತ್ತೀಚಿಗೆ ವಿನ್ನಿ ಹೇಳಿದ್ದು.. - ’ನನಗೆ ಕರಿದ ಪದಾರ್ಥ ತಿಂದ್ರೆ ಆಗಲ್ಲ.. ಅದ್ಕೇ ಮನಸ್ಸಲ್ಲಿ ಮಂಡಿಗೆ ಮಾತ್ರ ತಿನ್ನೋದು’ ). ಇದು ಸ್ವಲ್ಪ ಅತಿರೇಕಕ್ಕೆ ಹೋಗುತ್ತಿದೆ ಎಂದೆನಿಸಿದಾಗ ಮತ್ತೆ ಅತ್ತ ಕಣ್ಣುಹಾಯಿಸುವುದಿಲ್ಲ (ಅಂದರೆ ಬೇರೆಯವರಿಗೆ ಗೊತ್ತಾಗುವ ಹಾಗೆ ಆ ಕಡೆ ನೋಡುವುದಿಲ್ಲ) ಎಂದು ತೀರ್ಮಾನಕ್ಕೆ ಬಂದು ಗಪ್ಪಾದೆವು. ಆದರೂ ವಿನ್ನಿ ಆಗಾಗ ಕ್ಯಾಚ್ ಹಾಕು ಕ್ಯಾಚ್ ಹಾಕು ಅನ್ನುತ್ತಲೇ ಇದ್ದ..

ಬಸ್ ಹೋಗ್ತಾ ಹೋಗ್ತಾ ತೂಕಡಿಸುತ್ತಿದ್ದೆವು.. ಕಿವಿಯಲ್ಲಿ ಗುಂಯ್ ಗುಡುವ ಗಾಯಕರು ಆಗಾಗ ಬದಲಾಗುತ್ತಲೇ ಇದ್ದರು. ಯಾವುದೋ ಬ್ರಿಡ್ಜ್ ಇರಬೇಕು.. ಕತ್ತಲಲ್ಲಿ ಕಾಣಲಿಲ್ಲ.. ಬಸ್ ಒಮ್ಮೆಲೇ ಗಡ ಗಡ ಗಡ ನಡುಗತೊಡಗಿತು.. ’ಯಾವನ್ ಲೇ ಅಂವ್.. ಸೈಲೆಂಟ್ ಮೋಡ್ ಇಡು ಅಂದ್ರೆ ವೈಬ್ರೇಶನ್ನಲ್ಲಿಟ್ಟಾಂವ? ’ ಎಂದು ಹುಬ್ಬಳ್ಳಿ ಭಾಷೆಯಲ್ಲಿ ವಿನ್ನಿಗೆ ಮಾತ್ರ ಕೇಳುವ ಹಾಗೆ ಕೂಗಿದೆ.. ವಿನ್ನಿ ಗಹಗಹಿಸಿ ನಗತೊಡಗಿದ.. ನಾನು ಮಾಡಿದ ಪನ್ನಿಗೆ ನನಗೂ ನಗು ಬಂತು.. ಸಚಿನ್ ಎಂದಿನಂತೆ ’ಏನಾಯ್ತು ಏನಾಯ್ತು ’ ಕೇಳಿದ.. ವಿನ್ನಿ ಅವನಿಗೂ ಹೇಳಿ ನಕ್ಕ.. ಸಚಿನ್ನನೂ ಸಹ. ನಮ್ಮ ಹಸಿವಿನ ಬಗ್ಗೆ ಈಗಾಗಲೇ ಹೇಳಿದ್ದೆ.. ಅದು ಮತ್ತೆ ನೆನಪಿಗೆ ಬಂದಿದ್ದು ಇಪ್ಪತ್ನಾಲ್ಕು ಗಂಟೆ ಮದ್ದೂರ್ ಕಾಫಿ ಡೇ ನೋಡಿದಾಗ. ಅಂದರೆ ಮದ್ದೂರ್ ಬಂತು.. ಈಗ ಡ್ರೈವರ್ ಬಸ್ ನಿಲ್ಲಿಸ್ತಾನೆ..ಮೋಸ ಮಾದಲಿಲ್ಲ.. ನಿಲ್ಲಿಸಿದ. ಎದ್ನೋ ಬಿದ್ನೋ ಎಂದು ಓಡಿ ಹೋಗಿ ನಾನು ವಿನ್ನಿ ಎರಡೆರಡು ಪ್ಲೇಟ್ ಇಡ್ಲಿ ವಡೆ ಮುಕ್ಕಿದೆವು. ಸಚಿನ್ ಕುರ್ಕುರೆ, ಜೊತೆಗೆ ಮಿನರ್ಲ್ ವಟರ್ ಇಳಿಸಿದ. ಒಂಥರಾ ತೃಪ್ತಿ.. ಬಸ್ ಸ್ಟಾಂಡಿನ ಇನ್ನೋದಂಚಿನ ಮೂತ್ರಾಲಯ ತಲುಪುವ ಹೊತ್ತಿಗೆ ಸರಿಯಾಗಿ ಕರೆಂಟು ಹೋಯಿತು.. ಕರೆಂಟು ಎಲ್ಲಿಗೆ ಹೋಗುತ್ತದೆ ಎಂಬ ಪ್ರಶ್ನೆ ಮತ್ತೆ ಮೂಡಿತು.. ಅಲ್ಲಿ ಸರದಿ ಪ್ರಕಾರ ಒಂದೊಂದು ರೂಪಾಯಿ ಕೊಟ್ಟು ನಮ್ಮ ನಮ್ಮ ಜಲಬಾಧೆ ತೀರಿಸುವಷ್ಟರಲ್ಲಿ ಸಚಿನ್ ಫೋನಾಅಯಿಸಿದ.. ’ಬಸ್ ಹೊರಡ್ತಾ ಇದೆ.. ಬರ್ರೋ’.. ಓಡಿದೆವು.

"ಯೆಸ್ ಯೆಸ್"

ಬಸ್ ಹತ್ತಿದವನೇ ಮತ್ತೆ ವಿನ್ನಿ ಕೂಗಿಕೊಂಡ.. ಏನಾಯ್ತು?

"ಆ ಹುಡ್ಗಿ ಚೆನ್ನಾಗಿಲ್ಲ.. ಯೆಸ್ ಯೆಸ್.."

ಇದೊಂಥರಾ ಕಾಯಿಲೆ ಅಂದುಕೊಂಡು ಅವನನ್ನು ಸುಮ್ಮನಿರಿಸಿದೆ. ಸಚಿನ್ ಈಗ ನಗತೊಡಗಿದ್ದ. ಸ್ವಲ್ಪ ಹೊತ್ತಿಗೆ ಮುಂಚೆ ಕ್ಯಾಚ್ ಕ್ಯಾಚ್ ಅಂತ ಕೂಗಿದವ ಈಗ ಚೆನ್ನಾಗಿಲ್ಲ.. ಯೆಸ್ ಯೆಸ್ ಅಂತಿದ್ದಾನೆ. ಅನಂತನಾಗ್ ಒಮ್ಮೆ ಹೇಳಿದ್ದು - ’ಅತೀ ಹೆಚ್ಚಿನ ಖುಷಿ ಮತ್ತು ಅತೀ ಹೆಚ್ಚಿನ ದುಃಖ ಎರಡೂ ಮನುಷ್ಯನನ್ನು ಒಂದೇ ರೀತಿಯ ವೈರಾಗ್ಯ ಸ್ಥಿತಿಗೆ ಕೊಂಡೊಯ್ಯುತ್ತದೆ’ - ಇವನ ಅರಚಾಟವನ್ನು ನೋಡಿದರೆ ಎರಡರಲ್ಲಿ ಒಂದಾಗಿರುವುದು ಸ್ಪಷ್ಟವಾಗಿತ್ತು.. ನಮ್ಮೆಲ್ಲಾ ಈ ಗೌಜಿಗಳ ಪಕ್ಕದ ಸೀಟಿನಲ್ಲಿ ಸರಸ-ವಿರಸ-ಸಲ್ಲಾಪಗಳು ಮಾತ್ರ ಅವಿರತವಾಗಿ ನಡೆದೇ ಇತ್ತು . ಕಿಡಕಿ ಪಕ್ಕದ ನನ್ನ ಸೀಟಿಗೆ ಸಚಿನ್ ಆಕ್ರಮಣ ಮಾಡಿದ್ದರಿಂದ, ಮಧ್ಯದ ವಿನ್ನಿ ಮದ್ಯ ಕುಡಿದಂತೆ ಆಡುತ್ತಿದ್ದರಿಂದ, ದಾರಿ ಬದಿಯ ಸೀಟಿನ ನನಗೆ ನಡೆಯುತ್ತಿರುವ ಘಟನೆಗಳು ಇನ್ನೂ ಹತ್ತಿರವಾಗಿದ್ದವು.. !!

****

ಕಿವಿಗೆ ear-phone ಸಿಕ್ಕಿಸಿಕೊಂಡೇ ಅಮ್ಮನ ಜೊತೆ ಮಾತಾಡಿದೆ.. ಅಪ್ಪ ಏನೋ ಹೇಳುತ್ತಿರುವಾಗಲೇ ಬ್ಯಾಲೆನ್ಸ್ ಮುಗಿದು ಕರೆ ಕತ್ತರಿಸಿತು.. ಈಗ ರಜನೀಕಾಂತ ಪ್ರವೇಶ ಮಾಡಿದ.. ವಿನ್ನಿ Airtel Mobile Internet ನಲ್ಲಿ email ಓಪನ್ ಮಾಡಿ ರಜನೀಕಾಂತನ ಪ್ರವರಗಳನ್ನು ಓದತೊಡಗಿದ..ನೂರಕ್ಕೂ ಹೆಚ್ಚಿನ ಪನ್ ಗಳು ನಡೆದವು.. ಓದಿದ್ದೇ ಆದರೂ ಕಿಸ ಕಿಸ ನಗುತ್ತಿದ್ದೆವು.. ಅಲ್ಲೆಲ್ಲೂ ಇರದ ಆಫೀಸಿನ ಊಟದ ಸಮಯದ ಒಂದು ನನಗೆ ನೆನಪಾಯಿತು..

Once Rajanikanth's daughter lost veriginity.. and Rajanikanth found it and put it back

ಹ ಹಹ್ ಅಹಾ ಹ್ಹಹಹ ಹಹಹಹ್ಹ ಅಹ್ಹ ಹಹ ಎಂದು ಮೂವರೂ ಮುಂದಿನ ಸೀಟಿನ ಸರಳು ಹಿಡಿದು ನಕ್ಕೆವು.. ಸಚಿನ್ ನಕ್ಕೂ ನಕ್ಕೂ ಒಂದು ಚಪ್ಪಾಳೆಯನ್ನೂ ಹೊಡೆದ. ಕ್ಯಾಚ್ ಕ್ಯಾಚ್ ವಿನ್ನಿಗೆ ಈಗ ನಿಜಕ್ಕೂ ಕ್ರಿಕೆಟ್ ನೆನಪಾಯಿತು. ಯುವರಾಜನ ಆರಕ್ಕೆ ಆರು ಸಿಕ್ಸರ್ ಹೊಡೆದ ವಿಡಿಯೋವನ್ನು ಕಾಮೆಂಟರಿ ಸಮೆತ ಮೊಬೈಲಿನಲ್ಲಿ ಪ್ಲೇ ಮಾಡಿದ.. ಪಬ್ಲಿಕ್ ಪ್ಲೇಸ್ ನಲ್ಲಿ ಗಲಾಟೆ ಮಾಡಬಾರದು ಎಂದು Volume ಕಡಿಮೆ ಮಾಡಲು ಹೇಳಿದೆ. ’ಪಬ್ಲಿಕ್ ಪ್ಲೇಸ್ ನಲ್ಲಿ ಏನೆನೆಲ್ಲಾ ಮಾಡಬಹುದು!! ಇದೆಲ್ಲಾ ಏನು ಮಹಾ?’ ಎಂದ. ಮತ್ತೆ ನೆನಪಾಗಿ ಈಗ ಪಕ್ಕದ ಸೀಟು ನೋಡಿದ್ದು ನಾನು.

ಮೈಸೂರು ದೀಪಾಲಂಕೃತವಾದದ್ದು ಶ್ರೀರಂಗಪಟ್ಟಣದ ದ್ವಾರದಿಂದಲೇ ಗೊತ್ತಾಗುತ್ತಿತ್ತು. 40 w ಬಲ್ಬುಗಳನ್ನು ಸಾಲಾಗಿ ಹಾರದಂತೆ ಪೋಣಿಸಿ ತೂಗು ಬಿಟ್ಟಿದ್ದರು.. ದಾರಿಯುದ್ದಕ್ಕೂ ಮರಗಳ ಮೇಲೆ ಕೆಂಪು ಹಸಿರು ನೀಲಿ ಬಣ್ಣದ ದೀಪಗಳು.. ಒಂಥರಾ ಖುಷಿ.. ಸಂಭ್ರಮ.. ನಾಡ ಹಿರಿಮೆಯ ದಸರಾ ಮೂವರಿಗೂ ಮೊದಲನೆಯ ಅನುಭವ.. ರಾತ್ರಿ ಒಂಭತ್ತೂವಎಯೋ ಹತ್ತೋ ಆಗಿರಬೇಕು.. ಬಸ್ ಇಳಿದೆವು.. ಸಾಮಾಜಿಕ ಕಳಕಳಿ ಮೆರೆಯುವ ಯತ್ನದಲ್ಲಿ ಖಾಲಿ ಕುರ್ಕುರೆ ಕವರ್ರು, ಖಾಲಿ ಬಾಟಲಿಗಳನ್ನೆಲ್ಲಾ ಬಸ್ ನಲ್ಲಿ ಬಿಸಾಕದೆ ಕೈಯಲ್ಲೇ ಹಿಡಿದುಕೊಂಡು ಏನ್ಮಾಡೋದು ಅಂತ ಹಿಂದೆ ಮುಂದೆ ನೋಡುತ್ತಿದ್ದೆ.. ವಿನ್ನಿ ಮತ್ತೆ ’ಯೆಸ್ ಯೆಸ್’ ಅಂದ.. ಈಗೇನಾಯ್ತು ಕೇಳಿದ್ದಕ್ಕೆ ’ಅವಳು ನಿಜವಾಗಿ ಚೆನ್ನಾಗಿಲ್ಲ, ಪಾಪ ಅವಳ ಹುಡುಗ’ ಎಂದು ಪರಿತಾಪ ಪಟ್ಟ.. ’ಥೂ ಇವನ’ ಎಂದುಕೊಂಡೆ, ಸಚಿನ್ ಫೋನ್ ನಲ್ಲಿ ಬಿಜಿ.. ಸುರೇಶ್ ಹೆಬ್ಳೀಕರ್ ಜೊತೆಗೆ...