Wednesday, April 8, 2009

ಅರ್ಥ

ನಾಗಪ್ಪನ ಬಾಲ್ಯವೇನೂ ರೋಚಕತೆಗಳಿಂದ ಕೂಡಿರದಿದ್ದರೂ ನಿರಸವೇನೂ ಆಗಿರಲಿಲ್ಲ. ಶಾಲೆಗೆ ಹೋಗುವ ಸಂದರ್ಭಗಳೇ ಸೃಷ್ಟಿಯಾಗದ ಆ ಕಾಲದಲ್ಲಿ, ದಿನವೂ ಹಾಲು ಕೊಡಲು ಮಾಸ್ತರ ಮನೆಗೆ ಹೋಗುತ್ತಿದ್ದ ನಾಗಪ್ಪ ಮುಚ್ಚಳದ ಅಂಚಿನಿಂದ ಹಾಲುಚೆಲ್ಲದಂತೆ ಹಾಲಿನ ಉಗ್ಗವನ್ನು ಹಿಡಿದುಕೊಂಡು ಹೋಗುವುದೇ ತನ್ನ ಪ್ರತಿಭೆ ಎಂದುಕೊಂಡು ಬಿಗುತ್ತಿದ್ದ. ಮಾಸ್ತರರೂ ಹೆಚ್ಚೇನೂಹೇಳದೆ ತಂದ ಹಾಲು ಸರಿ ಇದೆಯೋ ಗಮನಿಸಿ ಉಗ್ಗ ತೊಳೆದು ಕೊಟ್ಟಾಗ ಅದನ್ನು ವಾಪಸ್ ತೆಗೆದುಕೊಂಡು ಹೋಗಿ ಅಮ್ಮನ ಕೈಮುಟ್ಟಿಸಿದರೆ ಮತ್ತೆ ದಿನವಿಡೀ ನಾಗಪ್ಪ ಏನೂ ಮಾಡುತ್ತಿರಲಿಲ್ಲ. ಮಾಸ್ತರರ ಮನೆಗೆ ನಿತ್ಯವೂ ಹೋಗುತ್ತಿದ್ದ ನಾಗಪ್ಪ, ಮಾಸ್ತರಬಳಿಯಿದ್ದ ಗಡಿಯಾರದ ನೋಡಿ, ಗಂಟೆ ನೋಡುವುದನ್ನು ಕಲಿಯಬೇಕು ಅಂತ ಮಾಸ್ತರ ಬಳಿ ದುಂಬಾಲು ಬಿದ್ದ. ' ಗಂಟೆನೋಡಲು ಬಂದರೆ ಮಾತ್ರ ಈ ಸಲದ ತೇರಿನಲ್ಲಿ ವಾಚು ' ಅಂತ ಅಪ್ಪ ಹೇಳಿದ ಮಾತುಗಳು ಇದಕ್ಕೆ ಕಾರಣವಾದರೂ ಮಾಸ್ತರರಮನೆ ಗಡಿಯಾರ ಪ್ರೇರಣೆಯಾಯಿತು. ಗಡಿಯಾರದಲ್ಲಿ ಎರಡು ಮುಳ್ಳುಗಳನ್ನು ಬಿಟ್ಟರೆ ಉಳಿದ ಸಂಖ್ಯೆಗಳ್ಯಾವುದನ್ನೂಗುರುತಿಸಲು ಬಾರದ ನಾಗಪ್ಪನಿಗೆ ಗಂಟೆ ನೋಡುವುದನ್ನು ಕಲಿತಿದ್ದು ಆತ್ಮವಿಶ್ವಾಸವನ್ನು ಹೆಚ್ಚಿಸಿತ್ತು. ಇದಾದ ವಾರದೊಳಗೆಮಾಸ್ತರರ ಬಳಿ ಬಂದು ಅವನು 'ಮಾಸ್ತರರೇ, ನಮ್ಮ ಒಡೆಯರ ಮನೆ ಗಡಿಯಾರದಲ್ಲಿ ಇರೂದು ನಾಲ್ಕೇ ಅಂಕಿ .. ೧೨.. ೩.. ೬.. ಮತ್ತೆ ೯... ನಿಮ್ಮನೆಲ್ಯಾಕೆ ಅಷ್ಟೆಲ್ಲಾ ಅದೆ?' ಅಂತ ಕೇಳಿಯೇ ಬಿಟ್ಟ.. ಇಂತಹ ಪ್ರಶ್ನೆಯನ್ನು ನಿರೀಕ್ಷಿಸಿರದ ಮಾಸ್ತರರುಗೊಂದಲಕ್ಕೊಳಗಾದದ್ದನ್ನು ತೋರಗೊಡದೆ ' ಅದೆಲ್ಲಾ ನಂಗೊತ್ತಿಲ್ಲ ... ನಾನು ತ್ರಿಕಾಲಜ್ಞಾನಿ ಅಲ್ಲ .. ನನ್ನ ತಲೆ ತಿನ್ಬೇಡ ' ಅಂದುಬಿಟ್ಟರು. ಮಾಸ್ತರರಿಗೆ ಗೊತ್ತಿಲ್ಲದದ್ದೆನನ್ನೋ ತಾನು ಕೇಳಿಬಿಟ್ಟೆ ಎಂದುಕೊಂಡು ನಾಗಪ್ಪನಿಗೆ ಖುಷಿಯಾಗಿ ಮಾಸ್ತರರ ಮೇಲಿದ್ದಅಭಿಮಾನವೂ ಒಂದು ಸ್ವಲ್ಪ ಕಡಿಮೆಯಾಗಿ ಏನು ಮಾಡಬೇಕೆಂದು ತಿಳಿಯದೆ ಚಡಪಡಿಸಿಬಿಟ್ಟ . ಅದಾದ ಮೇಲೆ ತ್ರಿಕಾಲ ಜ್ಞಾನಅಂದರೇನು ಎಂಬ ಪ್ರಶ್ನೆ ಹೊಸತಾಯಿತಾದರೂ , ಮಾಸ್ತರರ ಮನೆಯ ಗಡಿಯಾರಕ್ಕೆ ದಿನದ ಸಮಯ ಜಾಸ್ತಿ ಯಾಕೆ..? ಅಂತಮಾತ್ರ ಅರ್ಥವಾಗಲಿಲ್ಲ.