Saturday, January 22, 2011

ಎಪ್ಪತ್ತೈದು ಎಂ. ಎಂ. ಸಾಕಾಗಲ್ಲ..


ಸರ್ ಈ ಬುಕ್ ತಗೊಳ್ಳಿ ಎಂದು ಬೆನ್ನು ಬೀಳುವ ಭೂತಗಳು, ಬೇಡಪ್ಪಾ e ಬುಕ್ ಇದೆ ಎನ್ನುವ ನಾವುಗಳು, ನೋಡಿದರೆ ನೋಡುತ್ತಲೇ ಇರಬೇಕು ಎನ್ನಿಸುವ ಶಿಲ್ಪ, ಆನೆ ಒಂಟೆ ಕುದುರೆ ಕೆತ್ತನೆಗಳ ಸಾಲು, ಸ್ವಾಗತಕ್ಕೆ ಗಣೇಶ, ಪೂಜೆಗೆ ಶಿವ, ವಿಷ್ಣು, ಚಾವಣಿಯಲ್ಲಿ ಬ್ರಹ್ಮ. ಜಕಣನ ಕಲ್ಪನೆಯ ಸಾಕಾರ, ಹೊಯ್ಸಳರ ಸಾಮ್ರಾಜ್ಯದ ಮೇರು ಕೊಡುಗೆ, 'ಹೌ ಇಸ್ ದಿಸ್ ಪಾಸಿಬಲ್' ಎಂದು ಉದ್ಗರಿಸುವ ವಿದೇಶಿಗಳು, ಕಡಲೆ ಬೀಜ ತಿಂದು ಸಿಪ್ಪೆ ಒಗೆಯಲು ಪಕ್ಕದಲ್ಲಿ ನೋಡುವ ಸ್ವದೇಶಿಯರು..

ಇದು ಹಳೇಬೀಡು, ಹಾಸನ ಜಿಲ್ಲೆ, ಕರ್ನಾಟಕ

ಹಸಿರು ಪರಿಧಿಯಲ್ಲಿ ಕಂಗೊಳಿಸುವ ಸೌಂದರ್ಯ, ಕೆತ್ತನೆಯಲ್ಲೇ ಜೀವನವನ್ನು ಕಳೆದ ಶಿಲ್ಪಿಗಳ ಬದುಕು ತೋರಿಸುವ ಸೂಕ್ಷ್ಮಗಳು, ಹೊಯ್ಸಳೇಶ್ವರನ ಪಕ್ಕದಲ್ಲಿ ಇನ್ನೂ ಅಪೂರ್ಣವೇ ಇರುವ ನಂದಿ, ಕರ್ನಾಟಕ ಸರ್ಕಾರದ ವಸ್ತು ಸಂಗ್ರಹಾಲಯ, ಹಿಂದೂ ಪುರಾಣಗಳ ಶಿಲಾಚಿತ್ರಗಳು, ದಶಾವತಾರದ ಶಿಲಾಸಾಹಿತ್ಯಗಳು, ವಿಷ್ಣುವರ್ಧನನ ಜೈನಾಶ್ರಾಯಕ್ಕೆ ಸಾಕ್ಷಿಯಾಗಿ ನಿಂತ ಜಿನನ ಪುತ್ಥಳಿ, ಕಲ್ಲಿನ ಕಂಬ-ಬಾಗಿಲುಗಳು, ಥರ್ಮಾಕಾಲ್ ನಲ್ಲಿ ಮಾಡಲೂ ಕಷ್ಟವಾಗುವ ರಚನೆಗಳು, ಹೊರತಾಗಿ ಒಂದೇ ರೀತಿಯ ಎರಡು ಪ್ಪ್ರತಿಮೆಗಳು ಹುಡುಕಿದರೂ ಕಾಣಸಿಗದ ಶಿಲ್ಪಕಲೆಯ ತವರೂರು

ಇದು ಹಳೇಬೀಡು, ಹಾಸನ ಜಿಲ್ಲೆ, ಕರ್ನಾಟಕ

ನೀರವ ರಾತ್ರಿಯಲ್ಲಿ ಮನೆಗಳಲ್ಲೆಲ್ಲಾ ದೀಪ ಆರಿಸಿ ಮಲಗಿಯಾಗಿದೆ. ಆದರೆ ಬೀದಿ ದೀಪಗಳಿಗೆ ನಿದ್ದೆಯಿಲ್ಲ. ಇನ್ನೂ ಯಾರೋ ಬರಬಹುದೆಂಬ ಮನಸ್ಥಿತಿಯಲ್ಲಿ ಉದ್ದಕ್ಕೆ ಎದ್ದು ನಿಂತೇ ಇವೆ. ಕೆಲವು ದೂರದ ಫ್ಯಾಕ್ಟರಿಗಳಲ್ಲಿ ಇನ್ನೂ ಗರ ಗರ ಸದ್ದಿನ ಮಷಿನುಗಳು ರಾತ್ರಿ ಪಾಳಿಗೆ ಕಾದು ಕುಳಿತಿವೆ. ಸುತ್ತಲೂ ಹರಡಿ ಬಿದ್ದಿರುವ ಕೆರೆಯೂ ಸ್ತಬ್ಧ. ಕೆರೆಗೆ ಗೊತ್ತಿಲ್ಲ. ಮೇಲಿರುವ ಮೇಘವೇ ನಾಳೆ ಮಳೆಯಾಗಿ ತನ್ನ ಮೇಲೆ ಬೀಳಬಹುದು. ಮೋಡಗಳಿಗೂ ಗೊತ್ತಿಲ್ಲ. ತಾವು ಇಲ್ಲೇ ನಿರಾಗಬಹುದು. ಆದರೂ ನಾಳೆಯ ನಂಬಿಕೆಯಲ್ಲಿ ಮುಂದಿನ ಪ್ರಯಾಣಕ್ಕಾಗಿ ಬೀದಿ ದಿಪದಲ್ಲೇ ತಯಾರಿ ನಡೆಸಿವೆ.

ಇದು ರಾತ್ರಿ. ಮಡಿವಾಳ ಕೆರೆ ಪರಿಸರ, ಬೆಂಗಳೂರು.

ಪಕ್ಕದಲ್ಲೇ ಜಗದ್ವಿಖ್ಯಾತ ಶಿಲ್ಪಕಲಾ ತೊಟ್ಟಿಲು, ದಿನಂಪ್ರತಿ ಬರುವ ದೇಶ ವಿದೇಶಿಗರು , ಆದರೆ ಇದ್ಯಾವುದರ ಪರಿವೆಯೇ ಇಲ್ಲದೆ ದೈನಿಕದಲ್ಲಿ ತೊಡಗಿದ ಊರ ಜನರು ಈ ನದಿ ದಡದಲ್ಲಿ, ಶಾಲೆಯ ಮುಖ ಕಾಣದ ಚಿಟ್ಟೆ ಹಿಡಿಯುವ ಹುಡುಗರು, ತಂಗಿ ತಮ್ಮನ ಸ್ನಾನ ಮಾಡಿಸುವುದೇ ಆಟ ಮಾಡಿಕೊಂಡಿರುವ ಪುಟಾಣಿ ಹೆಣ್ಣುಮಕ್ಕಳು, ಪದೇ ಪದೇ ನಿರಿಗೆ ಜಿಗಿದು ದಣಿವಾರಿಸುವ ಯತ್ನದಲ್ಲಿ ಯುವಕರು, ತಮ್ಮ ತಮ್ಮ ಗಂಡಂದಿರ ಮಕ್ಕಳ ಬಟ್ಟೆ ತೊಳೆದು ತೊಳೆದು ತೇಯ್ದು ಹೋಗುತ್ತಿರುವ ಹೆಂಗಳೆಯರು..

ಇದು ಹೇಮಾವತಿ ನದೀತಟ, ಬೇಲೂರು

ನದೀ ತೀರದ ಅರ್ಧ ದಾರಿ, ದೂರದಲ್ಲಿ ತೀರದ ಹಂಗೇ ಇರದ ಭೂಭಾಗ , ಅಲ್ಲಿ ಬೆಳೆದ ತೆಂಗಿನಮರ, ಆಗಾಗ ಹಾರಿ ಬರುವ ಬಾನಾಡಿಗಳೇ ಸಂವಹನಾ ಕೊಂಡಿಗಳು.. ಈ ದಾರಿ ಆ ದ್ವೀಪವನ್ನು ಎಂದು ಸೇರುವುದೋ ಅಥವಾ ದ್ವೀಪವೇ ಈ ದಾರಿಯನ್ನು ಸೇರುವುದೋ ತಿಳಿಯದ ಗೊಂದಲ.. ದೂರದಲ್ಲಿ ಆಡುವ ಮಕ್ಕಳು, ರಸ್ತೆಯ ಮೇಲೆ ಬರುವ ಹೊಗೆ ಉಗುಳುವ ವಿಕಾರ ಧ್ವನಿಯ ವಾಹನಗಳು..

ಇದು ಹೇಮಾವತಿ, ಬೇಲೂರು

ಬಾನಿನಲ್ಲಿ ರಂಗು, ಓಕುಳಿ, ಬೆಳಕಿನಿಂದ ಕತ್ತಲೆಯೆಡೆಗೆ ಚಲಿಸಿದರೂ ಆ ಗೋಧೂಳಿ ಮನಮೋಹಕ.. ಹೇಮಾವತಿಗೆ ಅರಿಶಿನ ಕುಂಕುಮಗಳ ಸಂಭ್ರಮ.. ಬಾನಿಗೆ ಚೆಲ್ಲಾಟ.. ಮನೆಯ ಗೋಡೆಯ ಮೇಲೆ ಬಣ್ಣಗಳಿಂದ ಗೀಚಿ , ಅಪ್ಪನ ಭಯದಿಂದ ಓಡಿಹೋದ ಮಗುವಿನಂತೆ, ಕೆಂಪು ಸೂರ್ಯ ಸೀದಾ ಸಾದಾ ಬಿಳಿಯ ಮೋಡಗಳ ಮೇಲೆ ಬಣ್ಣ ಹಾಕಿ ಮೆಲ್ಲಗೆ ನೀರಿನಲ್ಲಿ ಜಾರಿಕೊಂಡ...

ಇದು ಗೋಧೂಳಿ, ಹೇಮಾವತಿ ಬೇಲೂರು

ಅನನ್ಯ ವನರಾಶಿ, ದರ್ಪ ಗಾಂಭೀರ್ಯಗಳ ಕಾಳಿ, ಕಾಳಿಯ ಸೊಕ್ಕು ಮುರಿಯಲು ನಿಂತ ಹೆಬ್ಬಂಡೆಗಳು, ಅವುಗಳಿಗೆ ಸವಾಲು ಹಾಕಿ ಕಾಳಿ ನಿರ್ಮಿಸಿದ ಒಡಕುಗಳು, ಎಲ್ಲವನ್ನೂ ಮೀರಿ ನಿಂತ ಮಾನವ ನಿರ್ಮಿತ ಸೂಪಾ ಡ್ಯಾಮ್ , ಬೆಳಗ್ಗೆ ಎಷ್ಟು ಬೇಗ ಎದ್ದು ಹುಡುಕಿದರೂ ಕಣ್ಣಿಗೆ ಬಿಲದ ಪ್ರಾಣಿಗಳು, ದೂರದಲ್ಲಿ ಜೋಡಿಯಾಗಿ ಕುಳಿತ ಹಾರ್ನ್ ಬಿಲ್ಲುಗಳು, ಜನರ ಸಾಗಾಣಿಕೆಗೆ ಸಿದ್ಧವಾಗಿರುವ ತೆಪ್ಪಗಳು, ಹೆದರಿಕೆ ಹುಟ್ಟಿಸುವ ರಾಫ್ಟ್ಗಳು, ಮಜಾ ಕೊಡುವ ಕಯಾಕಿಂಗ್ ಬೋಟುಗಳು..

ಇದು ದಾಂಡೇಲಿ , ಉತ್ತರಕನ್ನಡ, ಕರ್ನಾಟಕ

ಸಾಲಿನಲ್ಲಿ ನಿಲ್ಲಿಸಿದ ಕಾರುಗಳ ಕಾರುಭಾರು, ಸೈಕಲ್ ಹೋಗಲೂ ಜಾಗ ಬಿಡದಷ್ಟು ಜನ ಸಂದಣಿ, ರಾತ್ರಿ ೯ ಆಗುತ್ತಲೇ ಖಾಲಿ ಹೊಡೆಯುವ ಅಂಗಡಿಗಳು, ಪಕ್ಕದಲ್ಲೇ ಇರುವ ಪೋಲಿಸ್ ಠಾಣೆಯ ಮುಂದಿರುವ ವಾಹನಗಳ ಮೇಲೆ ಸದಾ ತಿರುಗುವ ಕೆಂಪು ದೀಪಗಳು, ಒಂದು ತುದಿಗೆ ಮೇನ್ ರೋಡು, ಇನ್ನೊಂದು ಬದಿಗೆ ದುರ್ಗದ ಬೈಲು, ಬೆಂಗಳೂರಿನ ಎಂ .ಜಿ ರೋಡಿಗೆ ಹೋಲಿಸುವ ಹುಬ್ಬಳಿಯ ರಸ್ತೆ..

ಇದು ಕೊಪ್ಪಿಕರ್ ರೋಡ್, ಹುಬ್ಬಳ್ಳಿ

ವರ್ಣನೆ ಬೇಕಿರದ ಚಿತ್ರ, ಸಂಭ್ರಮ ಸಡಗರದ ನಾಡಹಬ್ಬ, ಬೆಟ್ಟದಲ್ಲಿ ಕಾಯುವ ಚಾಮುಂಡಿ, ರಾಜರು, ದರ್ಬಾರು, ಸಿಂಹಾಸನ, ಆನೆ, ಸಾಂಸ್ಕೃತಿಕ ಸಭೆ, ನೃತ್ಯ, ಸಂಗೀತ, ವೈಭವ , ಜನಸ್ತೋಮ, ಗಜಿಬಿಜಿ, ವಸ್ತು ಪ್ರದರ್ಶನ, ಕಾರಂಜಿ, ಕಹಳೆ, ಸ್ತಬ್ಧಚಿತ್ರ, ನಂದೀಕೊಲು, ತಟ್ಟೆ ಇಡ್ಲಿ, ಮಲ್ಲಿಗೆ, ಸಾಹಿತ್ಯ, ಮೈಸೂರ್ ಮಾಕು, ಇವುಗಳ ಮಧ್ಯೆ ಸಂಜೆ ಏಳಕ್ಕೆ ಜಗಮಗಿಸುವ ನಾಡಹಿರಿಮೆಯ ಲಾಂಛನ...

ಇದು ಅಂಬಾವಿಲಾಸ, ಮೈಸೂರು ಅರಮನೆ, ದಸರಾ

ಹಿಂದೂ, ಮುಸ್ಲಿಂ, ರಜಪುತ್, ಇಂಗ್ಲೆಂಡಿನ ಗೋಥಿಕ್ ಕಲೆಗಳ ಮಿಶ್ರಣದ ವಾಸ್ತುಶಾಸ್ತ್ರ.. ೨೦೧೨ ಕ್ಕೆ ನೂರು ವರ್ಷಗಳ ಸಂಭ್ರಮ, ಒಡೆಯರ ಸಂಸ್ಥಾನದ ಏರಿಳಿತಗಳ ಕಂಡ ಅರಮನೆಗೆ ಈಗ ಕರ್ನಾಟಕ ಸರ್ಕಾರದ ಕಾವಲು, ಮೈದಾನ ವೀಕ್ಷಣೆಗಾಗಿ ನಿರ್ಮಿತ 'ಗೊಂಬೆ ತೊಟ್ಟಿ' , ರಾಜರ ದರ್ಬಾರು ನಡೆಯುವ 'ಅಂಬಾವಿಲಾಸ', ಕೇವಲ ವಿವಾಹ ಮಹೋತ್ಸವಗಳಿಗಾಗಿಯೇ ಮೀಸಲಿಟ್ಟ 'ಕಲ್ಯಾಣ ಮಂಟಪ' , ಎಲ್ಲಾ ಕಡೆ ಸುಂದರ ಚಿತ್ರಗಳು, ಚಿತ್ತಾರಗಳು

ಇದು ಮೈಸೂರು ಅರಮನೆ, ಕರ್ನಾಟಕ

ಗೋದಾವರಿಯ ಉಗಮ, ಶೂರ್ಪನಖಿ ರಾಮನಿಂದ ಮೂಗು ಕೊಯ್ಯಿಸಿಕೊಂಡ ಸ್ಥಳ , ಸೀತಾರಾಮರ ಪಂಚವಟೀ, ಅಜಂತಾ ಎಲ್ಲೋರಾ ಗುಹಾಂತರ ದೇವಾಲಯಗಳು, ಔರಂಗಾಬಾದಿನ ಕೋಟೆ, ಕೈಗೆ ಸಿಗುವ ಹತ್ತಿಯ ಚೀಲಗಳಂತ ಮೋಡಗಳು, ಮೈದಾನದಂತ ಪ್ರದೇಶದಲ್ಲಿ ಸಾಲಾಗಿ ಕುಳಿತ ಬೆಟ್ಟಗಳು, ಚಾರಣಯೋಗ್ಯ ಘಟ್ಟಗಳು, ತಿರುವು ಮುರುವು ಹಾವಿನಂತ ಕಪ್ಪು ರಸ್ತೆಗಳು

ಇದು ಮಾಲ್ಸ್ಹೆಜ್ ಘಾಟ್ , ನಾಸಿಕ್ , ಮಹಾರಾಷ್ಟ್ರ

ಕಣ್ಣು ಹಾಯಿಸಿದವರೆಗೂ ಕಾಣುವ ಅರಣ್ಯ, ಅಲ್ಲೊಂದು ಇಲ್ಲೊಂದು ಓಡಾಡುವ ಜೀಪುಗಳು, ಜನರ ಮುಖವೇ ಸಿಗದಂತ ಒಂಟಿ ಪ್ರದೇಶ, ರಾತ್ರಿ ವಸತಿಗೊಂದು ಬಿದಿರ ಗೂಡು, ಕೈ ಅದ್ದಿದರೆ ಮರಗಟ್ಟಿ ಹೋಗುವಂತ ತಂಪಿನ ನೀರು, ಕ್ಯಾಂಪ್ ಫೈರ್ ಜೊತೆ ತಿಂದ ಈರುಳ್ಳಿ ಬೋಂಡಾ, ಆಕ್ಟಿಂಗ್ ಮಾಡಿ ಸಿನೆಮಾ ಹೆಸರು ಹುಡುಕಿದ ಬಗೆ, ತಲೆ ತಿನ್ನುವ ಪ್ರಶ್ನೆಗಳು, ಎಂದೂ ವರ್ಕ್ ಆಗದ ಪ್ಲಾನುಗಳು, ಕಳ್ಳ ಪೊಲೀಸ ಆಟ..

ಇದು ನಾಗ ಝರಿ ಕಣಿವೆ, ದಾಂಡೇಲಿ ಅರಣ್ಯ, ಉತ್ತರ ಕನ್ನಡ

ಬಣ್ಣಗಳು, ಮೋಹಕತೆ, ಮಾದಕತೆ, ರೋಮಾಂಚನ, ಆತ್ಮೀಯತೆ, ಭಾವುಕತೆ, ಸೌಹಾರ್ದತೆ, ಎಲ್ಲಾ ಭಾವಗಳು ಮೇಳೈಸಿದ ಅನುಭೂತಿ, ಸಾಂಸ್ಕೃತಿಕ ರಾಜಧಾನಿ ಮೈಸೂರಿನ ಹೆಮ್ಮೆ,

ಇದು ಮೈಸೂರು ಅರಮನೆ, ಕರ್ನಾಟಕ

ಒಳಗೆ ಹೋಗಲು ಭಯ, ನಿಶ್ಶಬ್ದ, ಚಪ್ಪಲಿ ಹಾಕಿಕೊಂಡು ಹೋಗುವುದೋ ಬಿಡುವುದೋ ಎಂಬ ಸಂದಿಗ್ಧತೆ, ಉದ್ದಉದ್ದದ ಹಾಲ್ ಗಳು, ತೂಗು ಹಾಕಿದ ಕ್ರಿಸ್ತ ಪಟಗಳು, ಅಲ್ಲಲ್ಲಿ ಹಚ್ಚಿಟ್ಟ ಮೊಂಬತ್ತಿಗಳು, ಬೆಂಚಿನ ಮೇಲೆ ಕುಳಿದು ತದೇಕ ದೃಷ್ಟಿಯಿಂದ ಏನನ್ನೋ ನೋಡುತ್ತಿರುವ ಆರ್ದ್ರ ಮುಖಗಳು, ನೆಲೆಮಾಲಿಗೆಯಲ್ಲಿ ದೀನನಾಗಿ ಪ್ರಾರ್ಥಿಸುತ್ತಿರುವ ವಯೋವೃದ್ಧ, ಸುಂದರ ಕ್ಯಾಥೊಲಿಕ್ ಕೆತ್ತನೆಗಳು...

ಇದು ಫಿಲೋಮಿನಾ ಚರ್ಚ್ , ಮೈಸೂರು, ಕರ್ನಾಟಕ

ಕಾಳಿಯಂತ ಕಾಳಿಗೇ ಡ್ಯಾಮು ಕಟ್ಟಿದ ಮನುಷ್ಯರನ್ನು ಕಂಡ ಕಾಳಿ ತೆಪ್ಪಗಾಗಿದ್ದು ಇಲ್ಲಿ, ಶಾಂತ ಕಪ್ಪು ನೀರು ಇಲ್ಲಿಯ ಅರಣ್ಯ ವಾಸಿಗಳ ಜೀವನಾಧಾರ, ಸರಕಾರದ ಆಣತಿಯ ಮೇರೆಗೆ ಕಾಡಿನಂಚಿನಲ್ಲಿದ್ದ ಹಲವು ಬುಡಕಟ್ಟುಗಳನ್ನು ಸಿಟಿಗೆ ಸಾಗಿಸಲಾಗಿದೆ, ಸಾಗಿಸಲಾಗುತ್ತಿದೆ. ಅವರಿಗೋಸ್ಕರ ಮಾತ್ರವೇ ಬೆಳೆ ಬೆಳೆಯುತ್ತಿದ್ದ ಅವರು ನಗರದ ವ್ಯಾವಹಾರಿಕ ಬದುಕಿಗೆ ಹೊಂದಿಕೊಳ್ಳಲು ಹೆಣಗುತ್ತಿದ್ದಾರೆ. ದ್ಯೋಗವನ್ನರಸಿ ಮೂಲದಿಂದ ಹೊರ ನಡೆಯುತ್ತಿದ್ದಾರೆ. ಜೊತೆಗೆ ಅವರ ಸಂಸ್ಕೃತಿಯೂ ನಾಶದಂಚಿನಲ್ಲಿದೆ..

ಇದು ದಾಂಡೇಲಿ ಅರಣ್ಯ ಪ್ರದೇಶ , ಉತ್ತರಕನ್ನಡ

ಎಲ್ಲರಿಗೂ ಆತುರ, ಯಾರೂ ಕಾಯಲು ಸಿದ್ಧವಿಲ್ಲ .. ಒಬ್ಬರಿಗೆ ಮನೆಗೆ ಬೇಗ ಹೋಗುವ ಚಿಂತೆಯಾದರೆ ಇನ್ನು ಕೆಲವರಿಗೆ ರಾತ್ರಿ ಪಾಳಿಯ ಆಫೀಸು ಮುಟ್ಟುವ ಕಾತುರ. ಆಟೋದವರಿಗೆ ಗಿರಾಕಿಗಳ ಚಿಂತೆ, ಟ್ರಾಫಿಕ್ ಪೋಲಿಸ್ರಿಗೆ ಯಾರನ್ನಾದರೂ ಹಿಡಿದು ಕೈಲಾದಷ್ಟು ವಸೂಲಿ ಮಾಡುವ ಚಿಂತೆ, ರೊಯ್ಯ ರೊಯ್ಯನೆ ಅತ್ತಿಂದಿತ್ತ ಓಡಾಡುವ ವಾಹನಗಳ ಕಂಡು ರಸ್ತೆ ಗಾಬರಿ ಬಿದ್ದಿದೆ.. ಫ್ಲೈ ಓವರ್ ಗಳಿರಲಿ, ಅಂಡರ್ ಪಾಸುಗಳಿರಲಿ, ರಸ್ತೆ ಮಾಡಿದಷ್ಟೂ ನಮ್ಮಲ್ಲಿ ತುಂಬಲು ವಾಹನಗಳಿವೆ..

ಇದು ಸರ್ಜಾಪುರ ಜಂಕ್ಷನ್, ಹೊರ ವರ್ತುಲ ರಸ್ತೆ, ಬೆಂಗಳೂರು

ಸರ್ ಪೇಪರ್ನವರಾ?' 'ಅಲ್ಲ' 'ಮತ್ಯಾಕೆ ಫೋಟೋ ತೆಗೀತಿದ್ದೀರಾ?' ' ಸುಮ್ನೆ..' ' ಸುಮ್ನೆ ಅಂದರೆ?' ' ಇದೊಂಥರಾ ಹವ್ಯಾಸ' ' ಏನ್ ಮಾಡ್ತೀರ ಫೋಟೋನಾ?' ' ಏನೂ ಮಾಡೋದಿಲ್ಲಾ.. ಸುಮ್ನೆ ಇಂಟರ್ ನೆಟ್ ನಲ್ಲಿ ಹಾಕ್ತೀನಿ' ' ನನ್ದೊಂದ್ ತಗೀರಿ ಸರ್' 'ಸರಿ' 'ಎಲ್ಲಿ ತೋರ್ಸಿ' 'ನೋಡಿ ಸರ್ ನಿಮ್ ಫೋಟೋ' ' ಚೆನ್ನಾಗಿದೆ.. ಇದನ್ ಪ್ರಿಂಟ್ ಹಾಕಿ ಕಳಿಸ್ತೀರಾ ಸರ್?' '??!!'

ಇದು ಸರ್ಜಾಪುರ ಫ್ಲೈ ಓವರ್,ಬೆಂಗಳೂರು

ಏಕಶಿಲಾ ಬೆಟ್ಟದ ಒಂದು ಬದಿಗೆ ಕೊರಕಲು, ಅಲ್ಲಿ ಹರಿಯುವ ಕಾಳಿ, ಮಳೆ ನೀರಿನ ಕೊಯ್ಲು ಎಂಬ ವಿಜ್ಞಾನದ ಹೆಸರನ್ನು ಪ್ರಕೃತಿ ತನಗೆ ಬೇಕಾದ ಹಾಗೆ ನಿರ್ಮಿಸಿಕೊಂಡ ಪ್ರದೇಶ,ವಿವಿಧ ರೀತಿಯ ಕಲ್ಲುಗಳ ವರ್ಣನೆಯ ಫಲಕಗಳು.. ಇಲ್ಲಿ ಸತ್ತವರ ಸಂಖ್ಯೆ ಹನ್ನೆರಡು.. ನಿದ್ರೆಗೆ ಅತ್ಯ್ತುತ್ತಮ ಹೊರಾಂಗಣ

ಇದು ಸಿಂಥೇರಿ ರಾಕ್ಸ್, ಉತ್ತರ ಕನ್ನಡ

ಚಪ್ಪಲಿಯನ್ನು ಹೊರಗೆ ನಿಟ್ಟು ಪ್ರಾಂಗಣಕ್ಕೆ ಕಾಲಿಡುತ್ತಿದ್ದಂತೆಯೇ ಕೈಮುಗಿದು ನಿಂತ ಗರುಡ, ದ್ವಾರದಲ್ಲಿ ಹೊಯ್ಸಳ ಸಂಕೇತಗಳು,ಛಾವಣಿಗೆ ಅಂಟಿಕೊಂಡ ಶಾಂತಲೆಯ ಬಿಂಬ ಮೂಡಿಸುವ ದರ್ಪಣ ಸುಂದರಿ, ಸಾಲಾಗಿ ನೇತಾಡುವ ಹಲವಾರು ಶಿಲಾಬಾಲಿಕೆಯರು, ಸಣ್ಣ ಸಣ್ಣ ಕಿಟಕಿಗಳಿಂದ ಒಳನುಗ್ಗುವ ಸೂರ್ಯಕಿರಣ, ಕತ್ತಲೆಯಲ್ಲೂ ಹೊಳೆಯುವ ಚನ್ನಕೇಶವ, ಕಂಬಕ್ಕೊರಗಿ ನಿಂತ ಪರಿಮಾಣ ಸುಂದರಿ, ತಾಂತ್ರಿಕತೆಯ ಸಾರುವ ಕಂಬಗಳು, ವಿಷ್ಣುವರ್ಧನನ ಕಲಾಪ್ರೇಮ, ಹೊರಾಂಗಣದಲ್ಲಿ ಹಳ್ಳಿ ತಂತಿವಾದ್ಯಗಳಿಂದ ಹೊರಹೊಮ್ಮುವ ಸುಂದರ ಹಾಡು - 'ಮಳೆ ನಿಂತು ಹೋದ ಮೇಲೆ..'

ಇದು ಬೇಲೂರು, ಹಾಸನ ಜಿಲ್ಲೆ, ಕರ್ನಾಟಕ

ಪಾಯ ತೊಡದೆಯೇ ದೇವಲೋಕದಿಂದ ಹಾಗೇ ತಂದಿಟ್ಟಂತೆ ಕಟ್ಟಿದ ದೇಗುಲ, ಕಟ್ಟು ಕಥೆಯೋ ಅಥವಾ ನೈಜತೆಯೋ ಗೊತ್ತಾಗದಂತೆ ಕಿವಿಗೆ ಬೀಳುವ ಹಾಗಂತೆ ಹೀಗಂತೆಗಳು, ಬೆತ್ತಲೆ ನಿಂತ ಶಿಲಾಬಾಲಿಕೆಯರ ಕಂಡು ನಾಚುವ ಶಾಲಾ ಪ್ರವಾಸಕ್ಕೆ ಬಂದ ಪುಟಾಣಿಗಳು, ಹೊಯ್ಸಳರ ಪ್ರತಿನಿಧಿಯಂತೆ ಮಾತಾಡುವ ಗೈಡುಗಳು, ಗಡ್ಡ ಬಿಟ್ಟು ಸುತ್ತುವ ಬೈರಾಗಿಗಳು, ಚಪ್ಪಲಿ ಕಾಯುವ ಕಾಯಕದಲ್ಲೇ ಜೀವನ ಸಾಗಿಸುವ ಕುಟುಂಬಗಳು, ತಮ್ಮ ನೋಟವನ್ನು ಕೇವಲ ಕ್ಯಾಮರಾ ವ್ಯೂ ಗೆ ಸೀಮಿತಗೊಳಿಸಿದ ಫೋಟೋಗ್ರಾಫರ್ಗಳು...

ಇದು ಬೇಲೂರು, ಹಾಸನ ಜಿಲ್ಲೆ, ಕರ್ನಾಟಕ

ರಾತ್ರಿ ೯ ಗಂಟೆಗೂ ವ್ಯಾಪಾರ ನಡೆಸುತ್ತಲೇ ಇರುವ ಗಂಡುಭೂಮಿಯ ಅಂಗಡಿಗಳು, ಫೋಟೋ ತೆಗೆಯಲು ಬಂದವರನ್ನು ಕುತೂಹಲ ಭರಿತ ಹೆದರಿಕೆಯಿಂದ ನೋಡುವ ರಸ್ತೆ ಬದಿಯ ಹೂ ಮಾರುವವರು, ಗಿಜಿಗುಟ್ಟುವ ಕೊಪ್ಪಿಕರ ರಸ್ತೆಯಲ್ಲಿ ಅಲ್ಲಲ್ಲಿ ಚದುರಿಬಿದ್ದ ಕನಸಿನ ತುಣುಕುಗಳು, ಬಣ್ಣ ಬಣ್ಣದ ಬೆಳಕು ಬೀರುವ ಆಟಿಕೆಗಳು, ನಾಳೆಯ ಗುರಿ ಕಾಣದ ತಳ್ಳು ಗಾಡಿಯ ಚಕ್ರಗಳು, ಇವುಗಳನ್ನು ದಿನವೂ ಒಂದೇ ರೀತಿ ನೋಡುವ ಕುದುರೆಯ ಮೇಲೆ ಖಡ್ಗ ಹಿಡಿದ ಚೆನ್ನಮ್ಮ...

ಇದು ರಾಣಿ ಚೆನ್ನಮ್ಮ ಸರ್ಕಲ್ , ಹಬ್ಬಳ್ಳಿ, ಕರ್ನಾಟಕ

ಹದಿನೈದು ರೂಪಾಯಿಗೆ ಸಿಗುವ ಮಸಾಲೆ ದೋಸೆ, ಪಾವ್ ಬಾಜಿ, ಅದರ ಇನ್ನೊಂದು ಪಕ್ಕದಲ್ಲಿ ಚಪ್ಪಲಿ ಅಂಗಡಿ,ಬಣ್ಣದ ಪರ್ಸು , ಓದುವ ಪೀಪಿಯ ಮಾರಾಟಗಾರರು, ಸೈಕಲ್ ಮೇಲೆ ಮೂಟೆ ಹೇರಿಕೊಂಡು ಬರುವ ಚಾದರದವರು, ಎಂದೂ ಮುಂದೆ ಹೋಗದ ಅಂಗಡಿಗಳಿಗೂ ಚಕ್ರಗಳು, ವಯಸ್ಸಾದ ರಾಜಸ್ಥಾನಿಗಳು ನಡೆಸುವ ಚಾಟ್ ಸೆಂಟರ್ಗಳು, ಮಾರಾಟದ ವಸ್ತುಗಳನ್ನೇ ತನ್ನ ಮಾಲೆಯಾಗಿ ಧರಿಸಿದ ಪೇಟೆಯ ದೃಶ್ಯ, ಸಂತೆಯಂತೆ ಕಾಣುವ ಪ್ರತಿದಿನದ ಸಂಜೆ..

ಇದು ದುರ್ಗದ ಬೈಲು, ಹುಬ್ಬಳ್ಳಿ, ಕರ್ನಾಟಕ

ಸಂಜೆಯಾಗುತ್ತಲೇ ಗಿಜಿಗುಟ್ಟುವ ಫ್ಲೋರುಗಳು, ಹೆಚ್ಚಿನವರು ಟೈಮ್ ಪಾಸುಗಳು, ಕೆಲವರು ಆಹಾರಾರ್ಥಿಗಳು, ಮತ್ತೆ ಕೆಲವು ಗ್ರಾಹಕರು,ಇನ್ನುಳಿದವರು ದಾರಿ ತಪ್ಪಿ ಬಂದವರು !!, ಹೊರಕಟ್ಟೆಗಳಲ್ಲಿ ಕುಳಿತು ಗಹನ ವಿಚಾರಕ್ಕೆ ತೊಡಗಿದ ಜೋಡಿಗಳು, ಮ್ಯಾಕ್ ಡೊನಾಲ್ಡ್ ನಲ್ಲಿ ತಿಂದ ಹೊಟ್ಟೆಯ ಪರಿ ಮತ್ತು ಲ್ಯಾಂಡ್ ಮಾರ್ಕಿನ ಮೂಲೆಗಳಲ್ಲಿ ಕೂತು ಓದುತ್ತಿರುವ ತಲೆ, ಇದನ್ನು ನೋಡಿ ನಗುತ್ತಲಿರುವ ಸಿನಿಮಾ ಪೋಸ್ಟರುಗಳಲ್ಲಿನ ಬಣ್ಣದ ಮುಖಗಳು, ಬ್ಲಾಕ್ ಅಂಡ್ ವೈಟ್ ಬದುಕಿನ ಕಲರ್ಫುಲ್ ಚಿತ್ರಗಳು..

ಇದು ಫೋರಂ ಮಾಲ್ , ಬೆಂಗಳೂರು

ಹತ್ತುವವರು ಹಲವರು, ಇಳಿಯುವವರು ಹಲವರು, ಇಬ್ಬರನ್ನೂ ನೋಡುತ್ತಿರುವವರು - ಮೇಲೆ ನಿಂತವರು ಮತ್ತು ಕೆಳಗೆ ನಿಂತವರು .... ಸಂಬಂಧವೇ ಇಲ್ಲದಂತೆ ನಗುವ ಹೆಣ್ಣುಮಕ್ಕಳು, ಅವರ ಹಿಂದೆ ಕುರಿಗಳಂತೆ ಕಾಣುವ ಗಂಡು ಮಕ್ಕಳು, ಪಿ.ವಿ.ಆರ್. ನ ಸೀಟಿನಡಿಯಲ್ಲಿ ಬಿದ್ದ ಅನಾಥ ಪಾಪ್ ಕಾರ್ನ್ ಕವರ್ರುಗಳು, ಸಾಮ್ಸಂಗ್ ಗೆಲಾಕ್ಸಿಯ ತಿರುಗಾ ಮುರುಗಾ ಮಾಡಿ ನೋಡುತ್ತಿರುವ ಟೆಕ್ಕಿಗಳು.. ಸಂಜೆಯ ಲೈಮ್ ಲೈಟಿನಲ್ಲಿ ಆಗ ತಾನೇ ಮೂಡಿದ ಅರ್ಥವಾಗದ ನವ್ಯ ಕವಿತೆ..

ಇದು ಫೋರಂ ಮಾಲ್ , ಬೆಂಗಳೂರು

ಒಂದು ಪೆನ್ನಿಗೆ ಒಂದೂವರೆ ಸಾವಿರವಂತೆ, ಟೀ ಶರ್ಟಿನ ಮೇಲೆ ಬರೆದ ಬರಹ ಡಬ್ಬಲ್ ಮೀನಿಂಗಂತೆ, ಇಲ್ಲಿ ವಾಚ್ ರಿಪೇರಿ ಮಾಡಲ್ವಂತೆ, ಅವನು ಆಗಲೇ ಹತ್ತು ಬಾರಿ ಸಾರಿ ಹೇಳಿದ್ದಾನಂತೆ, ಮ್ಯಾಕ್ ವೆಜ್ಜಿಗೆ ಫ್ರೆಂಚ್ ಪ್ರೈಸ್ ಫ್ರೀ ಅಂತೆ, ಗುಜಾರೀಶ್ ಸಿನೆಮಾ ಸರಿ ಇಲ್ವಂತೆ, ಹೊರಗಡೆ ಇದು ಇಪ್ಪತ್ತು ರೂಪಾಯಿಗೆ ಸಿಗುತ್ತಂತೆ, ಹೆಲ್ಮೆಟ್ ಗೆ ಬೀಗ ಹಾಕೋದು ಮರ್ತೊಯ್ತಂತೆ, ನಾಳೆ ರಜೆಯಂತೆ, ಇವನು ಪೇಪರ್ ಹಾಕಿದನಂತೆ.. ಅಹುದೇ?

ಇದು ಫೋರಂ ಮಾಲ್, ಬೆಂಗಳೂರು.