Wednesday, April 7, 2010

ನೀನಿಲ್ಲದೆ...



ಭಾರವಾಗಿದೆ ಭಾವಗೀತೆ

ರಾಮನಿಲ್ಲದೆ ನೊಂದ ಸೀತೆ

ವಿರಹದಲ್ಲಿ ವಿವರದೊಂದಿಗೆ ಹಾಡಿದಂತಿದೆ

ನಿನ್ನ ಸೇರುವ ದಿನದ ತನಕ

ಒಂಟಿ ಜೀವದ ಮನದ ತವಕ

ಕಡಲ ಯಾತ್ರೆಯ ನದೀಪಾತ್ರದ ಜಾಡಿನಂತಿದೆ

ಉರಿದು ಸುಡುತಿಹ ಇರದ ಬೇನೆ

ದಿವಸ ಕೊಲ್ಲುವ ಕನಸ ಸೇನೆ

ಧೂಳು ಎಬ್ಬಿಸಿ ದಾಳಿ ಮಾಡುವ ನಿಟ್ಟಿನಲ್ಲಿದೆ

ಕಾಲವಾಯಿತು ಸೇರಿ ನಾವು

ಮುಳ್ಳು ಗಿಡದಲಿ ನಿಂತ ಹೂವು

ಕಂಪ ಬೀರದೆ ರಂಪ ಮಾಡುತ ಸಿಟ್ಟಿನಲ್ಲಿದೆ

ಎದೆಯ ಸಾಗರದಲೆಯು ಉಕ್ಕಿ

ಮಾರುವೇಷದ ಬಯಕೆ ಹಕ್ಕಿ

ಜಾಗ ಕೊಟ್ಟರೆ ಗೂಡು ಕಟ್ಟುವ ಹಂತದಲ್ಲಿದೆ

ಎಂದು ಎಲ್ಲಿ ನಮ್ಮ ಭೇಟಿ?

ನಿನ್ನ ಗೀತೆಗೆ ನನ್ನ ಧಾಟಿ

ಕಾದು ಕುಳಿತ ಪ್ರೇಮಗೀತೆ ಕಂಠದಲ್ಲಿದೆ