Saturday, August 21, 2010
ಮೇಲ್ಸೇತುವೆಯ ಕೆಳಗೊಂದು ಸ್ಮಶಾನ
ಜೀವಂತ ಹೆಣಗಳು
ಕೈಯಲ್ಲಿ ಮೊಬೈಲು
ಹಿಡಿದು ಹೊರಟಿವೆ..
ಸಿಕ್ಕ ಸಿಕ್ಕ ನಂಬರುಗಳನ್ನು
ಒತ್ತುತ್ತಾ
ಫೋನು ಮಾಡುತ್ತಾ
’ಹಲೋ’ ಎಂದರೆ ಮಾತಾಡದೆ
ಗುಮ್ಮಗಳಾಗಿವೆ.
ಅವುಗಳನ್ನು ಹೂಳುವವರಿಲ್ಲದೆ
ಸುಡುವವರಿಲ್ಲದೆ
ಅನಾಥವಾಗಿ
ಅಲೆಯುತ್ತಿರುವುದರಿಂದ
ಟ್ರಾಫಿಕ್ ಜಾಮ್ ಆಗಿದೆ
ರಾತ್ರಿ ಹನ್ನೊಂದಾದರೂ
ಮುಚ್ಚದ
ಕೆಲ ಆಫೀಸುಗಳಿಂದ
ಇನ್ನೂ ಕೆಲವು ಹೊರಬಂದಿವೆ.
ಸ್ವರ್ಗ ಮೇಲಿದೆ ಎಂದು ಯಾರೋ
ಹೇಳಿದ್ದಾರೆ, ಅದಕ್ಕೇ
ಅವು ಫ್ಲೈಓವರ್ ಹತ್ತಿ ಹೊರಟಿವೆ
ಅರ್ಧಕಟ್ಟಿದ ಮೇಲ್ಸೇತುವೆಯ
ಇನ್ನೊಂದೆಡೆ ಬಿದ್ದು
ಸಾಯುತ್ತಿದ್ದಾವೆ.
ಅವು ಈಗ
ಸತ್ತ ಹೆಣಗಳು
ಜೀವಂತ ಭೂತಗಳು.
Friday, August 20, 2010
ಇಲ್ಲಾ ಅಪ್ಪಾ.. ಇದೇ ಬಸ್ಸಿಗೆ ಹೋಗ್ಬೇಕು
'ಓ ಶಿಟ್, ಆಲ್ರೆಡೀ ಏಯ್ಟ್ ಥರ್ಟೀ’ ಎಂದು ತನ್ನಷ್ಟಕ್ಕೇ ತಾನು ಮಾತಾಡಿಕೊಂಡು ನಿನ್ನೆಯ ಪರಿಮಳದ ಸಾಕ್ಸನ್ನು ಒಮ್ಮೆ ಮೂಸಿದಾಗ ಜುಮ್ಮೆಂದಿತು. ’ಪರವಾಗಿಲ್ಲ’ ಎಂದು ಕಾಲಿಗೊಂದರಂತೆ ಕೀಲಿಸಿ ಮನೆ ಬಿಟ್ಟಾಗ ಎಂಟೂ ಮೂವತ್ತೈದು. ಗಡಿಬಿಡಿ ದಿನದ್ದೇ ಆದರೂ ಒಂಭತ್ತೂವರೆಗೇ ಶುರುವಾಗುವ ಟ್ರೀನಿಂಗ್ ಇವತ್ತಿನ ವಿಶೇಷವಾಗಿತ್ತು.
ಬಸ್ ಸ್ಟಾಂಡಿನಲ್ಲಿ ನಿಂತಿದ್ದ ಜನರು ಬಸ್ಸಿಗಾಗಿ ಹೊಂಚುಹಾಕುತ್ತಿದ್ದಾರೆ. ಗಾಳಕ್ಕೆ ಹುಳು ಸಿಕ್ಕಿಸಿ ಮೀನಿಗಾಗಿ ದಂಡೆಯಮೇಲೆ ಕಾಯುತ್ತಿದ್ದವರಂತೆ ಕತ್ತುದ್ದ ಮಾಡಿ ಬಸ್ಸಿನ ಬರುವನ್ನು ಕಾಯುತ್ತಿದ್ದಾರೆ. ಕೆಲವೊಬ್ಬರು ಬಸ್ಸು ಈಗಾಗಲೇ ಹೊರಟು ಹೋಗಿದೆ ಎಂಬ ಅಭಿಪ್ರಾಯದಲ್ಲಿ ರಸ್ತೆಯ ಇನ್ನೊಂದು ಬದಿಗೂ ಕಣ್ಣುಹಾಯಿಸಿ ಬಸ್ಸು ಹೋಗಿರಬಹುದಾದ ಸಾಕ್ಷಿಗಳಿಗೆ ಹುಡೂಕುತ್ತಿದ್ದಾರೆ. ರಶ್ಶಿರಲಿ ಬಿಡಲಿ, ಜಾಗ ಸಿಗಲಿ ಬಿಡಲಿ ಜೋತಾಡಿಕೊಂಡಾದರೂ ಸರಿ; ಬರುವ ಬಸ್ಸಿಗೆ ಹೋಗಲೇ ಬೇಕು ಎಂಬ ತೀರ್ಮಾನದಲಿ ಸಿಗ್ನಲ್ಲಿನ ಹಿಂದುಗಡೆ ಬಸ್ ಪ್ರತ್ಯಕ್ಷವಾಗುವ ಮಹಾಪರ್ವಕ್ಕೆ ಹಪಹಪಿಸುತ್ತಿದ್ದಾರೆ. ಸ್ವಲ್ಪ ಸೆಕೆಯಾಗಿರಬೇಕು.. ಅವರಲ್ಲೊಬ್ಬ ಶರ್ಟ್ ಗುಂಡಿ ಬಿಚ್ಚಿದ್ದಾನೆ.. ಉದ್ದ ತೋಳಿನ ಅಂಗಿ ಕೈಯ ಅಂಚನ್ನು ಹಿಡಿದು ಮೇಲಕ್ಕೆಳೆದುಕೊಂಡಿದ್ದಾನೆ. ’ಬಸ್ ಬರದೇ ಇದ್ದರೆ ನಾಲ್ಕು ಬಾರಿಸಿಬಿಡುತ್ತೇನೆ’ ಎಂಬ ನಿಲುವಿನಲ್ಲಿ ಮುಂದೆ ಬಂದು ನಿಂತಿದ್ದಾನೆ. ಆದರೂ ಬಸ್ ಬರುತ್ತಿಲ್ಲ.
ಅಷ್ಟರಲ್ಲಿ ಒಂದಿಷ್ಟು ಜನ ಬಸ್ಸನ್ನೇ ಮುಖ್ಯ ಗುರಿಯಾಗಿಟ್ಟುಕೊಂಡು ಮಾತನಾಡತೊಡಗಿದ್ದಾರೆ. ಸಾರಾಂಶ್ವಾಗಿ ಬಸ್ಸು ಇವತ್ತು ಬರುವುದೇ ಇಲ್ಲ ಎಂಬ ತೀರ್ಮಾನಕ್ಕೂ ಬಂದವರಂತೆ ಕಾಣುತ್ತಿದ್ದಾರೆ. ಒಂದಿಬ್ಬರು ಆಟೋ ಹಿಡಿದು ಹೋಗುವ ಸಲಹೆ ಕೊಟ್ಟರೇ ಹೊರತು ಯಾರೂ ಹೊರಡಲಿಲ್ಲ.ಇನ್ನೋದಿಷ್ಟು ಜನ ಬಸ್ ಸ್ಟಾಂಡೀನ ಕಡೆಗೇ ಬರುತ್ತಿರುವ ಜನರನ್ನು ನೋಡಿ ’ಛೇ ಫುಲ್ ರಶ್ಶಾಗುತ್ತೆ’ ಎಂದು ಮುಖ ಸಿಂಡರಿಸಿದ್ದಾರೆ. ನಿಂತವರ ವೈಯಕ್ತಿಕ ವಿಚಾರಗಳೆಲ್ಲವೂ ಸೇರಿ ಸಾಮೂಹಿಕ ವೇದನೆಯಾಗಿ ಬಸ್ ಸ್ಟಾಂದಿನಿಂದ ಹೊರಬರುತ್ತಿವೆಯೋ ಎಂಬಷ್ಟು ಅಸಹನೀಯ ಮುಖ ಮಾಡಿ ಎಲ್ಲರೂ ನಿಂತಿದ್ದಾರೆ. ಆಗ ಬಸ್ಸು ಬರುತ್ತದೆ.
ಅದು ಸ್ವಲ್ಪ ಇಳಿಜಾರು ರಸ್ತೆ. ಇಳಿಜಾರಿನ ಪ್ರಾರಂಭದಲ್ಲಿ ಸಿಗ್ನಲ್ ಇದೆ. ಅದರ ಕೆಳಗೆ ಈಗ ಬಸ್ ನಿಂತಿದೆ. ಸಿಗ್ನಲ್ ದಾಟಿದ್ದೇ ಬಸ್ ಸ್ಟಾಂಡು.ಈಗಷ್ಟೇ ಇಲ್ಲಿ ಚಡಪಡಿಕೆ ಪ್ರಾರಂಭವಾಗಿದೆ. ಇಷ್ಟೊತ್ತು ತಮ್ಮ ಜೊತೆಗೇ ಕಾಯುತ್ತಿದ್ದ ಬ್ಯಾಗ್ ಗಳನ್ನು ಮುಟ್ಟಿ ಮುಟ್ಟಿ ಸಿದ್ಧರಾಗುತ್ತಿದ್ದಾರೆ. ಪಕ್ಕದಲ್ಲಿದ್ದವರಿಗಿಂತ ಬೇಗ ಬಸ್ ಹತ್ತಿ ಸೀಟು ಹಿಡಿದು ಕುಳಿತುಬಿಟ್ಟರೆ ಇಳಿಯುವವರೆಗೆ ತೊಂದರೆಯಿಲ್ಲ ಎಂದುಕೊಳ್ಳುತ್ತಲೇ ಸುತ್ತಮುತ್ತಲಿದ್ದವರೆಲ್ಲಾ ಶತ್ರುಪಾಳೆಯದವರಂತೆ ಕಾಣುತ್ತಿದ್ದಾರೆ. ತಮ್ಮ ತಮ್ಮ ಅಸ್ತ್ರಗಳನ್ನು ಕೈಗೆತ್ತಿಕೊಂಡು ದಾಳಿಮಾಡಲು ಸನ್ನದ್ಧರಾದ ಸೈನಿಕರ ಗುಂಪೊಂದು ಈಗ ಬಸ್ ಸ್ಟಾಂಡಿನ ಎದುರಿನ ರಸ್ತೆಯ ಅಂಚಿನಲ್ಲಿದೆ.
ಕೆಲವರಿಗೆ ಆ ಬಸ್ಸಿನ ಬೋರ್ಡು ಅಲವರಿಕೆಯನ್ನುಂಟು ಮಾಡಿದೆ. ತಮಗೆ ಬೇಕಾದ ಊರಿನ ಹೆಸರನ್ನು ಆರಿಸುವ ಕೆಲಸ ಬಂತಲ್ಲಾ ಎಂದು ಬೇಸರಿಸಿಕೊಂಡಿದ್ದಾರೆ. ಕೆಲವರು ಬೋರ್ಡಿನಲ್ಲಿರುವ ಸಂಖ್ಯೆಮಾತ್ರದಿಂದಲೇ ’ಇದು ನಮ್ಮದೇ ಬಸ್’ ಎಂದು ಕಂಡುಹಿಡೀದಿದ್ದಾರೆ. ಸ್ವಲ್ಪ ಅನುಭವಸ್ಥರಂತೆ ಕಾಣುವ ಇನ್ನೊಂದಿಬ್ಬರು ಬಸ್ಸಿನ ಬೋರ್ಡಿನ ಕಡೆ ತಿರುಗಿಯೂ ನೋಡದೇ ತಮ್ಮದೇ ಎಂಬ ನಿರ್ಧಾರಕ್ಕ್ಕೆ ಬಂದಿದ್ದಾರೆ ಹಾಗೂ ಬಸ್ಸು ಇಲ್ಲೇ ಬಂದು ನಿಲ್ಲುತ್ತದೆ ಎಂಬ ತೀವ್ರ ವಿಶ್ವಾಸದಿಂದ ಬಸ್ ಸ್ಟಾಂಡಿಗಿಂತ ಎರಡು ಹೆಜ್ಜೆ ಮುಂದೆ ಹೋಗಿ ನಿಂತಿದ್ದಾರೆ. ಉದ್ದ ಜಿಗಿತ ಸ್ಪರ್ಧೆಯ ಕೊನೆಯ ಹಂತದ ಸುತ್ತಿಗೆ,ದೂರದಿಂದ ಓಡಿಬಂದು ಗೆರೆಯ ಮೇಲೆ ನಿಂತವರಂತೆ ಇಲ್ಲಿಂದಲೇ ಬಸ್ಸಿನ ಬಾಗಿಲಿಗೆ ಜಿಗಿಯುತ್ತೇನೆ ಎನ್ನುವ ಉತ್ಸಾಹದಲ್ಲಿ ಇನ್ನೂ ಕೆಲವರಿದ್ದಾರೆ. ಬಸ್ಸು ಹಸಿರಾದ ದಾರಿ ಸಂಕೇತವನ್ನು ಹಿಂಬಾಲಿಸಿ ಮುಂದೆ ಬರುತ್ತಲಿದೆ. ಬೋರ್ಡಿನ ಕೇಸರೀ ಬಣ್ಣದ ಅಕ್ಷರಗಳು ದಿಕ್ಕೆಟ್ಟವರಂತೆ ಓಡೂತ್ತಿವೆ. ಪಕ್ಕದಲ್ಲಿ ಸ್ಥಿರವಾಗಿದ್ದ ಅಂಕೆಗಳು ಹಳೇ ಆಫೀಸಿನ ಕಾರಕೂನ ಬರೆದಿಟ್ಟ ಯಾವುದೋ ರಸೀದಿ ಸಂಖ್ಯೆಯಂತೆ ಕಾಣುತ್ತಿವೆ. ವಿಷಾದಭಾವದಲ್ಲಿ ಖೈದಿಯ ಬಿಳೀ ಬಟ್ಟೆಯ ಮೇಲಿನ ಅಪರಾಹಿ ಸಂಖ್ಯೆಯಂತೆಯೂ ಕಂಡು ’ದಾರಿ-ದಾರ್ಶನಿಕ’ರಿಗೆ ಆಹಾರವಾಗಿದೆ.
ನಿಲ್ಲುವ ಮೊದಲೇ ಟುಸ್ ಎಂದು ಹೈಡ್ರಾಲಿಕ್ ಬಾಗಿಲುಗಳು ಬೇರ್ಪಡುತ್ತಿದ್ದಂತೆಯೇ ಬಿಳೀ ಬಣ್ಣದ ಕಂಡಕ್ಟರ್ ಎದುರಾಗುತ್ತಾನೆ.ಉದ್ದ ಜಿಗಿತದವರು, ಅನುಭಸ್ಥರೆಲ್ಲಾ ಈಗಾಗಲೇ ಬಸ್ ಹತ್ತಾಗಿದೆ. ಹಿಂದಿನಸಾಲಿನ ಸೀಟೊ ಬಿಡದಂತೆ ಆಸೀನರಾಗಿದ್ದಾರೆ. ಇದು ತಮ್ಮ ಹಳೇ ತಲೆಮಾರಿನ ಬಳುವಳಿ; ಯಾರಿಗೂ ಬಿಟ್ಟು ಕೊಡುವುದಿಲ್ಲ ಎಂದು ಪಟ್ಟು ಬಿದ್ದು ಕೂತಿರುವಂತೆ ಕಾಣುತ್ತದೆ. ಕೆಲವರಂತೂ ಎಷ್ಟೋ ವರ್ಷ ಇಲ್ಲೇ ಕುಳಿತವರಂತೆ ಕಾಣುತ್ತಾರೆ. ಬಸ್ಸು ಹೊಸದು. ’ಹೆಂಗಸರು/ಗಂಡಸರು’ ಎಂದು ಯಾವುದೇ ಸೂಚನೆ ಬರೆಯದೇ ಇದ್ದರೂ ಹಳೇ ಅಭ್ಯಾಸದಂತೆ ಹೆಂಗಸರೆಲ್ಲಾ ಮುಂದೇ ಕುಳಿತಿದ್ದಾರೆ. ಮತ್ತೆ ಟುಸ್ ಎಂದು ಬಾಗಿಲುಗಳು ಮುಚ್ಚುತ್ತಿದಂತೆಯೇ ಓಡಿ ಬಂದ ಒಬ್ಬ.. ’ಇದು ಮಾರೇನಹಳ್ಳಿ ಫ್ಲೈ ಓವರ್ ಮೇಲೆ ಹೋಗುತ್ತಾ?..."
ಎಂದು ಕೇಳುತ್ತಿದ್ದಾನೆ. ಮುಚ್ಚಿಕೊಳ್ಳುತ್ತಿದ್ದ ಬಾಗಿಲುಗಳು ಅವನ ಪ್ರಶ್ನೆ ಒಂದು ಪ್ರಶ್ನೆಯೇ ಅಲ್ಲ ಎಂಬರ್ಥದಲ್ಲಿ ವರ್ತಿಸುತ್ತಾ ಹೊರಗಿನ ಧ್ವನಿಯನ್ನು ಕ್ಷೀಣ ಗೊಳಿಸಿ ಕೊನೆಗೊಮ್ಮೆ ಮಾಯ ಮಾಡಿವೆ. ಅರ್ಧವಾರ್ಷಿಕ ಪರೀಕ್ಷೆಯಲ್ಲಿ ಕೊನೇ ಪ್ರಶ್ನೆಯೊಂದಕ್ಕೆ ಉತ್ತರ ಸಿಗದವನಂತೆ ಮುಖಮಾಡಿ ನಿಂತವನ ಹಿಂದಿಕ್ಕಿ ಬಸ್ಸು ಹೊರಟಾಗ ಪ್ರಯಾಣಿಕರು ಹೊರಜಗತ್ತಿನ ಕೊಂಡಿಯೊಂದರಿಂದ ಸಂಪೂರ್ಣವಾಗಿ ಕತ್ತರಿಸಲ್ಪಡುತ್ತಾರೆ.
ಈ ಹೊಸಾ ಬಸ್ಸಿನ ಬಾಗಿಲುಗಳು ಜಾಸ್ತಿ ಶಬ್ದ ಮಾಡುವುದಿಲ್ಲ. ಸೀಟಿಗಿನ್ನೂ ಎಣ್ಣೆ ವಾಸನೆ ಹಿಡಿದಿಲ್ಲ. ನಿಂತವರು ಜೋತಾಡಲು ಇರುವ ಗಳುಗಳೆಲ್ಲ ಗಟ್ಟಿಮುಟ್ಟಾಗಿವೆ. ಅದಲ್ಲದೆ ರಸ್ತೆ ಕ್ಯಾಮರಾಗಳ ನೇರಪ್ರಸಾರ ಮಾಡುವ ಟೀವಿಯೊಂದುತನ್ನ ಕ್ಯಾಬಿನ್ನಿನೊಳಗೇ ಬಂಧಿಯಾದ ಚಾಲಕನ ಎದುರಿನಲ್ಲಿದೆ. ಕಂಡಕ್ಟರನ ಕೈಯಲ್ಲಿ ಟಿಕೆಟ್ ಕೊಡುತ್ತಾ ಸುರುಳಿ ಬಿಚ್ಚುವ ಪೆಟ್ಟಿಗೆ, ಬೇಡವೆಂದರೂ ನಿಲ್ಲಿಸದ ಎಫ್.ಎಂ ರೇಡಿಯೋ, ಅಗಲ ಗಾಜಿನ ಒಮ್ಮುಖ ಪಾರದರ್ಶಕ ಗೋಡೆಗಳು, ಅವೇ ಬಸ್ಸಿನ ಕಿಟಕಿಗಳು.. ಹವನಿಯಂತ್ರಿತ ವಾತಾವರಣ, ತಮ್ಮ ತಲೆಗೆ ಮಾತ್ರ ಗಾಳಿ ಬಿಟ್ಟಿಕೊಳ್ಳಲು ಪ್ರತಿ ಸೀಟಿನ ಮೇಲೆ ತಂಪು ಪಂಕಗಳ ವ್ಯವಸ್ಥೆ..ಇನ್ನೂ ಏನೇನೋ.. ಡ್ರೈವರ್ ಈಗ ಕಂಡಕ್ಟರನ ಹತ್ತಿರ ಮಾತಾಡುತ್ತಲೇ ಮುಂದಿನ ಸಿಗ್ನಲ್ನಲ್ಲಿ ಬಸ್ಸನ್ನು ನಿಲ್ಲಿಸುತ್ತಾನೆ. ಸಿಗ್ನಲ್ಲ್ನಲ್ಲಿ ಬಂದು ಬಾಗಿಲು ಬಡಿಯುವವರಿಗೆ ’ತೆಗೆಯುವುದಿಲ್ಲ’ ಎಂಬಂತೆ ಕೈಸನ್ನೆ ಮಾಡಿ ತನಗಿರುವ ಅಧಿಕಾರವನ್ನು ಅಥವಾ ಸಾಧ್ಯತೆಯೊಂದನ್ನು ಪ್ರಯೋಗ ಮಾಡಿದ ಕೃಥಾರ್ಥ ಭಾವನೆಗೆ ಗುರಿಯಾದ ವ್ಯಕ್ತಿಯಂತೆ ಚಾಲಕ ಕಾಣುತ್ತಾನೆ.
ಇನ್ನು ಹತ್ತಿದವರಿಗೆ ಸೀಟಿಲ್ಲ. ಕುಳಿತವರೆಲ್ಲಾ ತಪಸ್ವಿಗಳಂತೆ, ಏನನ್ನೋ ಜಪಿಸುತ್ತಿರುವಂತೆ ಭಾಸವಾಗುತ್ತಿದೆ. ಯಾರೂ ಸಹ ಯಾರ ಮುಖವನ್ನೂ ನೋಡುತ್ತಿಲ್ಲ. ಪುಸ್ತಕಗಲಲ್ಲೋ, ಪತ್ರಿಕೆಗಳಲ್ಲೋ ಮುಖ ಹುದುಗಿಸಿ, ತಾವು ಯಾರಿಗೂ ಕಾಣುತ್ತಿಲ್ಲ ಎಂಬ ಬಧ್ರತೆಯನ್ನು ಅನುಭವಿಸುತ್ತಿರುವಂತೆ ತೋರುತ್ತದೆ. ನಿಂತವರಲ್ಲಿ ಕೆಲವರು ನಿಂತಿದ್ದೇವಲ್ಲ ಎಂಬ ಕಾರಣಕ್ಕೆ ಹೊರಗಡೆ ದೃಷ್ಟಿ ಹಾಯಿಸಿದ್ದಾರೆ. ಇನ್ನು ಸ್ವಲ್ಪ ಮಂದಿ ತಮ್ಮ ಚೀಲಗಳನ್ನು ಆ ಹೆಗಲಿನಿಂದ ಈ ಹೆಗಲಿಗೆ ವರ್ಗಾಯಿಸುತ್ತಾ ಕಾಲ ಕಳಿಯುತ್ತಿದ್ದಾರೆ. ಕೈಯಲ್ಲಿ ಬ್ಯಾಗ್ ಹಿಡಿದವರು ಕಂಡಕ್ಟರ್ ಬಂದು ಟಿಕೆಟ್ ಅಂದಾಗ ಹಣ ತೆಗೆಯಲು ಪರ್ಸಿಗೆ ಯಾವ ಕೈ ಹಾಕಬೇಕೆಂದು ಗೊತಾಗದೇ ಗೊಂದಲಕ್ಕೀಡಾಗಿದ್ದಾರೆ.’ಬ್ಯಾಗ್ ಅಲ್ ಮೇಲ್ ಇಡಿ.. ಇಲ್ಲಾಂದ್ರೆ ಕೂತವರ ಕೈಗೆ ಕೊಡಿ’ ಅಂದರೆ ಕೇಳುತ್ತಿಲ್ಲ. ಆ ಬ್ಯಾಗುಗಳಲ್ಲಿ ಅವರ ಹೊರಗಿಣುಕಿ ನೋಡುವ ಫೈಲುಗಳಿವೆ.. ಕನ್ನಡ ಶಾಲೆ ಮಾಸ್ತರ್ರು ಅಥವಾ ಅವರವರ ಅಪ್ಪಂದಿರು ಕೊಟ್ಟ ಹಳೇ ಇಂಕ್ ಪೆನ್ ಇದೆ.. ಅಥವಾ ಇರಬಹುದು. ಮನೆಯಿಂದ ಪಂದ ಟಿಫನ್ ಕ್ಯಾರಿಯರ್ ಗಳಿರಬಹುದು. ಅದರಲ್ಲಿ ಬಿಸಿ ಬಿಸಿ ಪುಳಿಯೋಗರೆ ಗೊಜ್ಜಿರಬಹುದು. ಈಗ ಸ್ವಲ್ಪ ತಣ್ಣಗಾಗಿರಬಹುದು. ಅಥವಾ ಬ್ಯಾಗ್ ಖಾಲಿಯೂ ಇರಬಹುದು. ಖಾಲಿತನವಿರಲಿ ಬಿಡಲಿ, ಒಟ್ಟಿನಲ್ಲಿ ಹಿಡೀದವನ ಮನಸ್ಸಿಗೆ ಜೊತೆಯಲ್ಲಿದ್ದೇನೆ ಎಂಬ ನೆಮ್ಮದಿ ಕೊಡುವ ಬ್ಯಾಗುಗಳನ್ನು ಬಿಟ್ಟು ಅವರು ಇರಲಾರರು. ಅದಕ್ಕೇ ಒಂದು ಕೈಲಿ ಬ್ಯಾಗ್ ಹಿಡಿದೇ ಸಾಹಸ ಮಾಡುತ್ತಿದ್ದಾರೆ.
ಬಸ್ಸಲ್ಲಿ ಕುಳಿತವರೆಲ್ಲರೂ ಮೂಕವಿಸ್ಮಿತರು. ಬಸ್ ಹತ್ತುವಾಗ ಮಾತಾಡುತ್ತಿದ್ದವರೂ ಸಹ ಬಸ್ ಹತ್ತಿದ ಮೇಲೆ ಮಾತುಕಳೆದುಕೊಂಡವರಂತೆ, ಪಕ್ಕದಲ್ಲಿದ್ದವ್ರೂ ಅಪರಿಚಿತರಂತೆ ವರ್ತಿಸುತ್ತಿದ್ದಾರೆ. ಕಂಡಕ್ಟರ್ ಮಾತ್ರ ಆಗಾಗ ಅದೂ ಇದೂ ಅಂತ ಬಡಬಡಾಯಿಸುತ್ತಿದ್ದಾನೆ. ’ಎಲ್ಲಿಗೆ? ಪಾಸು ತೆಗಿರ್ರೀ’ ಎಂದೆಲ್ಲಾ ಮೂಕಿಜನರ ಬಾಯಿಬಿಡಿಸಲು ಪ್ರಯತ್ನಿಸುತ್ತಿದ್ದಾನೆ ಶಾಲಾ ಪರೀಕ್ಷೆ ಕೋಂಎಯಲ್ಲಿ ಪರಿವೀಕ್ಷಕರು ತಿರುಗಿದಂತೆ ಬಸ್ಸಿನ ಉದ್ದಗಲಕ್ಕೂ ಒಮ್ಮೆ ತಿರುಗಿ ಬಂದು ಮತ್ತೆ ಆಸೀನನಾಗುತ್ತಾನೆ. ಈ ಪ್ರಕ್ರಿಯೆ ಬಹಳ ಸಾರಿ ನಡೆದರೂ ಪ್ರತಿ ಸಲವೂ ಹೀಗೆ ಏಕೆ ನಡೆಯುತ್ತಿದೆ ಎಂಬ ಪ್ರಶ್ನೆಗೆ ಉತ್ತರ ಗೊತ್ತಿಲ್ಲದವನಂತೆಯೇ ಇತ್ತು ಅವನ ಮುಖಭಾವ.
ಹಳೇ ಬಸ್ಸುಗಳಂತೆ ಈ ಬಸ್ಸಿಗೆ ಕಿಟಕಿಗಳೇ ಇಲ್ಲ.. ಕಿಟಕಿ ಸರುಗಳೂ ಇಲ್ಲ.. ಎಲ್ಲಾ ಗಾಜಿನ ಗೋಡೆಗಳು.. ಅದರ ಮೇಲೆ ಅಂಟಿಸಿದ ಬಣ್ಣಬಣ್ಣದ ಅರೆಪಾರದರ್ಶಕ ಜಾಹೀರಾತುಗಳು.. ಒಳಗೆ ಕೂತ ಯಾರಿಗೂ ಈ ಬಣ್ಣಗಳು ಕಾಣುವುದೇ ಇಲ್ಲ..ಇವೆಲ್ಲವನ್ನೂ ಮೊದಲೇ ನೋಡಿದ್ದೇನೆ.. ಏನೂ ವಿಶೇಷವಿಲ್ಲ ಎಂಬಂತಿರುವ ಅವರುಗಳು ನೋಡುವ ಪ್ರಯತ್ನವನ್ನೂ ಮಾಡುತ್ತಿಲ್ಲ. ಆಸಕ್ತಿ ತೋರಬಯಸುವ ಮನಸುಗಳೂ ದಾಕ್ಷಿಣ್ಯ ತೋರುತ್ತಿದ್ದಾವೆ... ನಟಿಸುತ್ತಿದ್ದಾವೆ..ಮಾತನಾಡಲು ಕಾರಣವಿದ್ದೂ ಮಾತನಾಡಿದರೆ ಎಲ್ಲಿ ತಪ್ಪಾಗುತ್ತದೋ ಎಂದು ಮೌನವ್ರತ ವಹಿಸಿದ್ದಾವೆ.. ಪಕ್ಕದವರ ಪುಸ್ತಕದಲ್ಲಿ ಅಥವಾ ಪತ್ರಿಕೆಯ ಒಳಗೆ ಹಣಕಲು ಅವಕಾಶವಿದ್ದೂ ವಿಚಿತ್ರ ಹಿನ್ನೆಡೆ ಅನುಭವಿಸಿದ್ದಾವೆ. ಎಲ್ಲಿ ಮಾತಾಡಿಬಿಡುತ್ತೇನೋ ಅಥವಾಇಲ್ಲಿ ಇತರರು ಮಾತಾಡಿದ್ದು ಕೇಳಿಬಿಡುತ್ತದೋ ಎಂದು ಭಯಪಟ್ಟಿದ್ದಾವೆ.. ಈ ಭಯವೇ ಕೂತವರ ದಾಕ್ಷಿಣ್ಯವಾಗಿ ಮಾರ್ಪಟ್ಟೀದೆ. ಮುಖದಲ್ಲಿ ಯಾವ ಭಾವನೆಯೂ ಇಲ್ಲದೆ, ಮನೆಯಿಂದ ಬರುವಾಗ ಬಿಸಿ ಬಿಸಿ ಕಾದ ಇಸ್ತ್ರಿಪೆಟ್ಟಿಗೆಯಿಂದ ಮುಖಕ್ಕೆ ಇಸ್ತ್ರಿ ಹಾಕಿಕೊಂಡು ಬಂದವರಂತೆ ಕೂತುಬಿಟ್ಟಿದ್ದಾರೆ. ಎಫ್.ಎಮ್ ಮಾತ್ರ ತನಗೆ ಬೆಕಾದ ಹಾಡನ್ನು ತನ್ನ ಪಾಡಿಗೆ ತಾನು ಗುನುಗಿಕೊಳ್ಳುತ್ತಿದೆ. ಆರ್ ಜೆಗಳ ಧ್ವನಿಗಳು ಅಡಕೊತ್ತಿನಲ್ಲಿ ಸಿಕ್ಕಿಕೊಂಡ ಅಡಿಕೆಯಿಂದ ಮಧ್ಯೆ ಮಧ್ಯೆ ತೂರಿಬರುತ್ತಿವೆ. ಯಾವುದೇ ಭಾಷೆಯ ಯಾವುದೇ ಹಾಡು ಬಂದರೂ ಜನರದ್ದು ಒಂದೇ ಭಾವ. ಸ್ಥಿತಪ್ರಜ್ಞ ಗಂಭೀರವದನಗಳಿಂದ ಅಲಂಕೃತರಾದ ಪ್ರಯಾಣಿಕರು ಯಾವ ಸಂಗತಿಗಳು ಜರ್ಗಿದರೂ ತಾವಿರುವುದು ಹೀಗೇ ಎಂದು ಕುಳಿತ ರಸ್ತೆ ಬದಿಯ ವಿಗ್ರಹಗಳಿಗೆ ಉಪಮೆಯಾಗುತ್ತಾರೆ.
ಮುಂದಿನ ಸರ್ಕಲ್ಲಿನಲ್ಲಿ ಮತ್ತೆ ಸಿಗ್ನಲ್ಲು.. ಹಸಿರಿಂದ ಕೆಂಪಗಾಗುವ ಹಂತದಲ್ಲಿ.. ಬಸ್ಸಿನ ವೇಗೋತ್ಕರ್ಷ ಹೆಚ್ಚುತ್ತಿದೆ. ರೊಯ್ಯನೆ ಸರ್ಕಲ್ ದಾಟುತ್ತಿದ್ದಂತೆಯೇ ಎದುರಿಗೆ ಮೋಟರ್ ಬೈಕ್ ಸವಾರನೊಬ್ಬ ಅಡ್ಡ ಬಂದ.. ಬಸ್ಸಿಗೆ ಬಡಿದೇ ಬಿಟ್ಟ ಎಂಬಷ್ಟರಲ್ಲಿ ಹಾರಿಕೊಂಡ.. ಬಿದ್ದ.. ಬಸ್ಸಿನಲ್ಲಿ ಕೆಲವು ಜನ ಎದ್ದು ನಿಂತಿದ್ದಾರೆ.. ಗೋಡೆಗಳಂತಿದ್ದ ಕಿಟಕಿಯಲ್ಲಿ ಕಣ್ಣಿಟ್ಟಿದ್ದಾರೆ. ಬಿದ್ದವನ ಬಳಿ ಗುಂಪು ಸೇರಿತು.. ಬಿದ್ದವ ಈಗ ಏಳುತ್ತಿದ್ದಾನೆ.. ಬಸ್ ಬಳಿಗೇ ದುರುಗುಟ್ಟಿ ನೋಡುತ್ತಿದ್ದಾನೆ.. ಏನೋ ಕೂಗುತ್ತಿದ್ದಾನೆ.. ಸಿಟ್ಟಿನಲ್ಲಿ ತುಟಿಗಳು ಅದುರುತ್ತಿವೆ.. ಕೈ ಮೇಲೆತ್ತಿ ಬಸ್ ನಿಲ್ಲಿಸಲು ಕಿರುಚುತ್ತಾ ಬರುತ್ತಿದ್ದಾನೆ.. ಅವನು ಕೂಗಿದ್ದು ಮಾತ್ರ ಬಸ್ಸಿನಲ್ಲಿರಿವ ಯಾರಿಗೂ ಕೇಳುತ್ತಿಲ್ಲ.. ಬಯ್ಯುತ್ತಿರಬೇಕು ಅಂದುಕೊಂಡಿರಬೇಕು.. ಮೂಕಿ ಚಿತ್ರ ನೋಡಿದಂತೆ ಅವರವರ ಮನಸ್ಸಿಗೆ ಬಂದಂತೆ ಅಂದುಕೊಂಡು ಅಯ್ಯೋ ಪಾಪ ಎಂದು ನಿಟ್ಟುಸಿರು ಬಿಟ್ಟಿದ್ದಾರೆ. ಡ್ರೈವರ್ ಮಾತ್ರ ಹೆದರಿಕೆಯಿಂದ ವೇಗವನ್ನು ಇನ್ನೂ ಹೆಚ್ಚಿಸುತ್ತಲೇ ಇದ್ದಾನೆ.. ಬಿದ್ದವ ಸಣ್ಣವನಾಗುತ್ತಾ ಆಗುತ್ತಾ ಕೊನೆಗೊಮ್ಮೆ ಮಾಯವಾಗುವ ಹೊತ್ತಿಗೆ ಬಸ್ಸು ದಿನವೂ ಹೊಗುವ ದಾರಿ ಬಿಟ್ಟು ಯಾವುದೋ ಒಳ ದಾರಿ ಹಿಡಿದು ನುಗ್ಗಿತ್ತು.
ಸ್ವಲ್ಪ ಮುಂದೆ ಹೋಗುವಷ್ಟರಲ್ಲಿ ಕೆಂಪು ಧ್ವಜ ಸಿಕ್ಕಿಸಿದ ಬೈಕುಗಳಲ್ಲಿ ಹಿಂಬಾಲಿಸುತ್ತ ಬಂದ ಹಲವರಲ್ಲಿ ಬಿದ್ದವನೂ ಇದ್ದಾನೆ!! ಚಾಲಕನ ಎದೆ ಧಸ್ ಎನ್ನುತ್ತದೆ. ಧಸ್ ಎಂದದ್ದು ಎಲ್ಲರಿಗೂ ಕೇಳಿದಂತೆ ಕುಳಿತವರೆಲ್ಲಾ ಕಂಗಾಲಾಗುತ್ತಾರೆ. ರೋಷಾವೇಷಗಳಿಂದ ತನ್ನನ್ನು ಬೀಳಿಸಿದ ಬಸ್ಸನ್ನು ಮುತ್ತಲು ಬರುವ ಉಮೇದಿಯಲ್ಲಿ ಅವನ ಮುಖ ಕೆಂಪಾಗಿದೆ. ಇಷ್ಟು ಹೊತ್ತು ತಟಸ್ಥವಾಗಿದ್ದ ಬಸ್ಸಿನ ಒಳಗಿನ ಲೋಕದಲ್ಲಿ ತಣ್ಣನೆಯ ಹೆದರಿಕೆಯ ಅಲೆಯೊಂದು ಎದ್ದು ಕೂತಿದೆ. ಅಕ್ಕ ಪಕ್ಕದವರ ಮುಖ ನೋಡಿ ಭಯವನ್ನೂ ಆತಂಕವನ್ನೂ ಹಸ್ತಾಂತರಿಸುತ್ತಾ ಅದರಲ್ಲೇ ನೆಮ್ಮದಿ ಕಂಡಂತೆಲ್ಲಾ ಆಗುವ ಭಾವನೆ ಎಲ್ಲರ ಮುಖವನ್ನು ಅಲಂಕರಿಸಿದೆ. ಬಸ್ಸಿನ ವೇಗವನ್ನು ಹೆಚ್ಚಿಸುತ್ತಾನೆ ಚಾಲಕ. ಗುಂಪು ಹಿಂಬಾಲಿಸುತ್ತಲೇ ಇದೆ. ಬಲಗಡೆಯ ಕ್ರಾಸಿನಲ್ಲಿ ಬಸ್ ತಿರುಗುತ್ತಿದ್ದಂತೆ ದೊಡ್ಡದೊಂದು ಕಲ್ಲು ಬಸ್ಸಿಗೆ ಬಡಿಯುತ್ತದೆ. ಗಾಜು ಪುಡಿಪುಡಿಯಾಗಿ ಕಲ್ಲು ಒಳನುಗ್ಗುತ್ತದೆ.. ಚಾಲಕ ಇನ್ನೂ ವೇಗ ಹೆಚ್ಚಿಸಿದ್ದಾನೆ.. ಗುಂಪು ನಿಧಾನವಾಗಿ ದೂರವಾಗುತ್ತಿದೆ.. ಬಿದ್ದ ಕಲ್ಲು ಬಸ್ಸಿನ ಒಳ ಜಗತ್ತಿನ ಪರಿಚಯವಿಲ್ಲದೆ ಸುಮ್ಮನೆ ಬಿದ್ದುಕೊಂಡಿದೆ.
ಕಲ್ಲು ಬಿದ್ದದ್ದೇ ತಡ ಇಷ್ಟೊತ್ತಿಲ್ಲದ ಹೊರ ಜಗತ್ತು ಒಡೆದ ಕಿಟಕಿಯಲ್ಲೇ ಒಳನುಗ್ಗುತ್ತದೆ.ಮತ್ತೆ ಆಫೀಸಿನ,ಫೈಲುಗಳ,ಬ್ಯಾಗುಗಳ,ಪೆನ್ನುಗಳ,ಟಿಫಿನ್ ಕ್ಯಾರಿಯರ್ ಗಳ ವಿಚಾರಗಳ ಆವರಣವನ್ನು ಛೇದಿಸಿ ಹೊರಗಿನ ಸದ್ದೆಲ್ಲವೂ ಒಳಗೆ ತುಂಬಿಕೊಳ್ಳುತ್ತಾ ಹೋಗುತ್ತದೆ. ’ಸಧ್ಯ ಕಲ್ಲು ಯಾರಿಗೂ ಬಡಿಯಲಿಲ್ಲ’ ಎಂದು ಸಮಾಧಾನದಿಂದ ಪಕ್ಕದವರ ಮುಖ ನೋಡುತ್ತಾರೆ. ’ಅರೆ ಇಷ್ಟೊತ್ತು ಇಲ್ಲಿ ಕೂತಿದ್ದು ನೀವೇನಾ,, ಗೊತ್ತೇ ಆಗಲಿಲ್ಲ’ ಎಂಬ ಭಾವನೆ ಇಬ್ಬರಲ್ಲೂ ಮೂಡುತ್ತದೆ. ಕೆಲವೊಬ್ಬರು ಮೊಬೈಲು ಕಿವಿಗಿಟ್ಟು ಜೋರಾಗಿ ಯಾರ ಜೊತೆಯೋ ನಡೆದ ಘಟನೆಯ ವಾರ್ತಾಪ್ರಸಾರ ನಡೆಸಿದ್ದಾರೆ.ಒಟ್ಟಿನಲ್ಲಿ ಯಾವುದೋ ವರ ಸಿಗುತ್ತಿರುವ ಹಾಗೆ ಪದೇ ಪದೇ ಆ ಒಡೆದ ಕಿಟಕಿ ಗಾಜನ್ನೇ ನೋಡುತ್ತಿದ್ದಾರೆ. ಪುಸ್ತಕಗಳಲ್ಲಿ ತಲೆ ಹುದುಗಿಸಿದವರೆಲ್ಲರೂ ಎಫ್.ಎಂ ಹಾಡಿಗೆ ತಲೆ ತೂಗುತ್ತಿದ್ದಾರೆ. ತಮ್ಮ ಬ್ಯಾಗುಗಳನ್ನು ಹೆಚ್ಚು ಒತ್ತಿಕೊಂಡು ನಿಂತಿದ್ದವರು ಕೂತವರ ಕೈಗೆ ಕೊಟ್ಟು ’ಸ್ವಲ್ಪ ಹಿಡ್ಕೊಳ್ಳಿ’ ಅಂದಿದ್ದಾರೆ. ಕುಳಿತವರು ’ಏನೋ ಆಗುತ್ತದೆ ಅಂದುಕೊಂಡಿದ್ದೆವು.. ಸದ್ಯ ಏನೂ ಆಗಲಿಲ್ಲ’ ಎನ್ನುತ್ತಾ ಬ್ಯಾಗು ಇರಿಸಿಕೊಂಡಿದ್ದಾರೆ. ಬ್ಯಾಗುಗಳ ಆತ್ಮೀಯತೆ ಅವರಿಗೂ ಇಷ್ಟವಾಗುತ್ತದೆ. ’ಯಾರೂ ಹೆದ್ರಬೇಡಿ.. ಏನೂ ಅಗಿಲ್ಲ’ ಎಂದು ಕಂಡಕ್ಟರ್ ಮಾತನ್ನು ಹಾರಿಸುವ ಯತ್ನದಲ್ಲಿದ್ದಾನೆ. ಆಗಲೇ ಕಂಡಕ್ಟರ ನೆರಮನೆಯ ಸಂಬಂಧಿಕನಂತೆ ಕಾಣುತ್ತದೆ. ವೇಗವನ್ನು ಹೆಚ್ಚಿಸುತ್ತಲೇ ಇದ್ದ ಚಾಲಕ ನೂರು ಮೀಟರ್ ಓಟಕ್ಕೆ ಮೊದಲು ಸೂಚನೆಗಾಗಿ ಕಾಯುತ್ತಿರುವವರಂತೆ ಮೈ ಬಗ್ಗಿಸಿ ಗಾಡಿ ಓಡಿಸುತ್ತಿದ್ದಾನೆ. ಬಸ್ಸು ಈಗ ಹಳೇ ಪರಿಚಯದ ಗೆಳೆಯನ ಮನೆಯಂತೆ ಕಾಣುತ್ತಿದೆ. ಆತಂಕ, ಗಾಬರಿ,ಕೋಪಗಳೆಲ್ಲಾ ಹೊಸ ಉಲ್ಲಾಸವಾಗಿ ನಗು ಬರುತ್ತಿದೆ. ಗಾಜು ಚೂರಾಗಿ ನಿರ್ಮಾಣವಾದ ಕಿಟಕಿಯಿಂದ ಸೂರ್ಯ ಬಿಸಿಲು ಕೋಲನ್ನು ನುಗ್ಗಿಸಿದ್ದಾನೆ. ಬಿಸಿಗಾಳಿ ಒಳಬರುತ್ತಿದೆ. ಅದರ ಬೆಚ್ಚನೆಯ ಅನುಭಾವಕ್ಕೆ ನೈಸರ್ಗಿಕ ಅನಿಲದ ಆಸ್ವಾದನೆಗೆ ಮುಖ ಕೊಟ್ಟವರು ಹಲವರು.
ಬಸ್ಸು ಕೊನೆಗೂ ತಿರುಗಿ ತಿರುಗಿ ತನ್ನ ಹಳೇ ಹಾದಿಗೆ ಬರುತ್ತದೆ. ದಾರಿಯನ್ನು ವೇಳೆಯಲ್ಲಿ ಅಳೆಯುವವರು ಹತ್ತು ನಿಮಿಷ ಲೇಟಾಯ್ತು ಅಂದಿದ್ದಾರೆ. ಆ ಕಿಡಿಗೇಡಿಗಳ ಗುಂಪು ದೂರಾಗಿರುವುದನ್ನು ಧೃಢಪಡಿಸಿಕೊಂಡ ಚಾಲಕ ನಿಧಾನವಾಗಿ ಸಮಚಿತ್ತಕ್ಕೆ ಮರಳುತ್ತಿದ್ದಾನೆ. ಮುಂದಿನ ಶ್ತಾಪಿನಲ್ಲಿ ಬಸ್ ನಿಲ್ಲಿಸಿ ಬಾಗಿಲು ತೆರೆಯುತ್ತಾನೆ.’ಟುಸ್’ ಎಂದ ಬಾಗಿಲುಗಳು ಈಗ ಮಹತ್ವವನ್ನು ಕಳೆದುಕೊಂಡಿವೆ. ಕುಳಿತವರು,ನಿಂತವರು,ಜೋತುಬಿದ್ದವರಿಗೆಲ್ಲಾ ಬೆಕಾದ ಹೊರಸಂಪರ್ಕ ಒಡೆದ ಕಿಟಕಿಯಿಂದಲೇ ಲಭ್ಯವಾಗಿದೆ. ಈಗ ಬಾಗಿಲ ಹೊರಗೆ ಸಿಮೆಂಟ್ ಚೀಲವನ್ನು ಹಿಡಿದ ಅಪ್ಪ, ಪುಟ್ಟ ಮಗನೊಡನೆ ನಿಂತಿದ್ದಾನೆ. ಗಾರೆ ಕೆಲಸಕ್ಕೆ ಬೆಕಾದ ಕೆಲವು ಪರಿಕರಗಳು ಚೀಲದ ಹರುಕು ಬದಿಯಿಂದ ಹೊರಗಿಣುಕುತ್ತಿವೆ. ’ಎಲೆಕ್ಟ್ರಾನಿಕ್ ಸಿಟಿ..? ಎಷ್ಟು?’ ಅಪ್ಪ ಕೇಳುತ್ತಾನೆ. ಮಗ ಒಳನುಗ್ಗಲು ಒಂದು ಕಾಲು ಫೂಟ್ ಬೋರ್ಡಿನ ಮೇಲೆ ಇಟ್ಟಾಗಿದೆ. ’ಇಪ್ಪತ್ತೈದು’ ಕಂಡಕ್ಟರ್ ಎನ್ನುವಷ್ಟರಲ್ಲೇ ಡ್ರೈವರ್ ಬಾಗಿಲು ಮುಚ್ಚಿದ್ದಾನೆ. ಅಪ್ಪ ಮಗನನ್ನು ಹೊರಗೆಳೆದುಕೊಳ್ಳುತ್ತಾನೆ. ಬಸ್ ವೇಗ ಗಳಿಸುತ್ತಿದೆ. ’ ಅದಕ್ಕೆ ಇಪ್ಪತ್ತೈದಂತೆ.. ಬೇರೆ ಬಸ್ಸಿಗೆ ಹೋಗೋಣ..’ ’ಇಲ್ಲಾ ಅಪ್ಪಾ.. ಇದೇ ಬಸ್ಸಿಗೆ ಹೋಗ್ಬೇಕು’ ಮಗು ಹಠಹಿಡಿದಂತೆ ಕಾಣುತ್ತಿದೆ.. ಅಪ್ಪ ಬರುತ್ತಿಲ್ಲ.. ಮಗನನ್ನೂ ಬಿಡುತ್ತಿಲ್ಲ. ಅಪ್ಪನ ಕೈಯಿಂದ ತಪ್ಪಿಸಿಕೊಂಡು ಬಸ್ ಹಿಂದೆಯೇ ಮಗ ಓಡಿ ಬರುತ್ತಿರುವುದನ್ನು ಬಸ್ಸಿನಲ್ಲಿ ಯಾರೋ ನೋಡಿದ್ದಾರೆ.. ಮತ್ತು ಎಲ್ಲರಿಗೂ ತೋರಿಸಿದ್ದಾರೆ. ’ನಾನೂ ಬರ್ತೀನಿ’ ಎಂದು ಕೂಗುತ್ತಾ ಬರುತ್ತಿರವ ಅವನನ್ನು ಬಾ ಬಾ ಎಂದು ಕೂಗುತ್ತಿದ್ದಾರೆ. ಅವನು ಕೈ ಮೇಲೆ ಮಾಡಿ ಬಸ್ಸನ್ನು ಸಮೀಪಿಸುತ್ತಿದ್ದಂತೆಯೇ ಜನ ಒಡಕು ಕಿಟಕಿಯಲ್ಲಿ ಕೈ ಹಾಕಿ ಅವನನ್ನು ಎತ್ತಿ ಒಳಕ್ಕೆಳೆದುಕೊಳ್ಳುತ್ತಾರೆ. ಬಸ್ಸಿನೊಳಗಿಂದಲೇ, ಅದೇ ರಂಧ್ರದಲ್ಲಿ ತಲೆ ಹೊರಗೆ ಹಾಕಿ ಅಪ್ಪನನ್ನೂ ಕರೆಯುತ್ತಿದ್ದಾನೆ. ನಡೆಯುತ್ತಿದ್ದ ಘಟನೆ ನೋಡಿ ದಂಗಾದ ಅಪ್ಪ ಈಗ ಬಸ್ಸಿನ ಹಿಂದೆಯೇ ಓಡಿ ಬರುತ್ತಿದ್ದಾನೆ...
Monday, June 7, 2010
ನಯನಯುಗ್ಮಗಳು
ಕೊಂಡಿಯನ್ನು ಕ್ಲಿಕ್ಕಿಸಿ ನೀವೂ ಕೇಳಿ :
http://www.youtube.com/watch?v=42StQLxlXFY&feature=player_embedded
ಅದರ ಭಾವಾನುವಾದ ಅದೆ ರಾಗದಲ್ಲಿ..
(ವಿ.ಸೂ: ನನಗೆ ತಮಿಳು ಬರುವುದಿಲ್ಲ. ಅದರ ಇಂಗ್ಲಿಷ್ ಅನುವಾದವನ್ನು ಓದಿ ಕನ್ನಡೀಕರಿಸಿದ್ದೇನಷ್ಟೇ..)
Saturday, June 5, 2010
ಕರೆ
ಬಾನಲ್ಲಿ ಗರಿಯಾಗಿ
ಕಾನಲ್ಲಿ ಝರಿಯಾಗಿ
ಗಿರಿ ಗಿರಿ ಗಿರಿ ಗಿರಿ ತಿರುಗುವ ಬಾ
ವೈಚಾರಿಕ ಗುಂಪು ಸಂತೆಲಿ ಸಾಧ್ಯತೆಗಳ ಸಂಪು ನಡೆದಿದೆ
ಗರಿಬಿಚ್ಚಿದ ಗುಬ್ಬಿ ಜೀವವು ಕದಮುಚ್ಚಿಯೆ ಒಳಗೆ ಮಲಗಿದೆ
ನೋಡುತ್ತಲೇ ಬೆರಗಾಗಿ
ಕಾಡುತ್ತಿರೋ ಗುರಿಯಾಗಿ
ಆಗಸದಿ ಸೆರೆಯಾಗಿ
ಮಿರಿ ಮಿರಿ ಮಿರಿ ಮಿರಿ ಮಿನುಗುವ ಬಾ
ಸುದ್ದಿಕಟ್ಟೆಯ ಮರವು ಕೂಡಾ ವಿದ್ಯಮಾನದ ಗುರುತು ಮರೆತಿದೆ
ಶಶಿಯ ವದನದ ಕಲೆಗಳಿಂದು ನಿದ್ದೆ ಮಾಡದೆ ಎದ್ದು ಕುಳಿತಿವೆ
ದೈವದತ್ತ ವರವಾಗಿ
ಭವಿತವ್ಯದ ಪರವಾಗಿ
ಕೊನೆಯಿಲ್ಲದ ಸಿರಿಯಾಗಿ
ಸರಿ ಸರಿ ಸರಿ ಸರಿ ಕರಗುವ ಬಾ
Wednesday, April 7, 2010
ನೀನಿಲ್ಲದೆ...
ಭಾರವಾಗಿದೆ ಭಾವಗೀತೆ
ರಾಮನಿಲ್ಲದೆ ನೊಂದ ಸೀತೆ
ವಿರಹದಲ್ಲಿ ವಿವರದೊಂದಿಗೆ ಹಾಡಿದಂತಿದೆ
ನಿನ್ನ ಸೇರುವ ದಿನದ ತನಕ
ಒಂಟಿ ಜೀವದ ಮನದ ತವಕ
ಕಡಲ ಯಾತ್ರೆಯ ನದೀಪಾತ್ರದ ಜಾಡಿನಂತಿದೆ
ಉರಿದು ಸುಡುತಿಹ ಇರದ ಬೇನೆ
ದಿವಸ ಕೊಲ್ಲುವ ಕನಸ ಸೇನೆ
ಧೂಳು ಎಬ್ಬಿಸಿ ದಾಳಿ ಮಾಡುವ ನಿಟ್ಟಿನಲ್ಲಿದೆ
ಕಾಲವಾಯಿತು ಸೇರಿ ನಾವು
ಮುಳ್ಳು ಗಿಡದಲಿ ನಿಂತ ಹೂವು
ಕಂಪ ಬೀರದೆ ರಂಪ ಮಾಡುತ ಸಿಟ್ಟಿನಲ್ಲಿದೆ
ಎದೆಯ ಸಾಗರದಲೆಯು ಉಕ್ಕಿ
ಮಾರುವೇಷದ ಬಯಕೆ ಹಕ್ಕಿ
ಜಾಗ ಕೊಟ್ಟರೆ ಗೂಡು ಕಟ್ಟುವ ಹಂತದಲ್ಲಿದೆ
ಎಂದು ಎಲ್ಲಿ ನಮ್ಮ ಭೇಟಿ?
ನಿನ್ನ ಗೀತೆಗೆ ನನ್ನ ಧಾಟಿ
ಕಾದು ಕುಳಿತ ಪ್ರೇಮಗೀತೆ ಕಂಠದಲ್ಲಿದೆ
Thursday, February 18, 2010
ಕಣ್ಣಿನ ಶಬ್ದ
ಕಳೇಬರವ ಹೂಳಲಾಗಿದೆ
ಮೋಡ ಚೆಲ್ಲಿ ಇಂದು ಬಿರುಸಿನ
ಮಳೇಬರುವ ವೇಳೆಯಾಗಿದೆ
ಬಿದ್ದ ರಭಸಕೆ
ಎದ್ದು ಕೂತು
ಸುದ್ದಿ ಮಾಡುವುದೇ ಈ ಸ್ವಪ್ನ?
ಖಾಲಿಪುಟದಲಿ ಗೀತೆಯೊಂದನು
ಬರೆದು ಬರೆದು ಅಳಿಸಲಾಗಿದೆ
ಬಾನಿನಂಚಲಿ ನೋಡುತಿದ್ದೆನು
ಕವನವೊಂದು ಮಿಂಚಿ ಹೋಗಿದೆ
ಗೀಚಿದ ಸಾಲಿನ
ಸೂಚಿತ ಅರ್ಥಕೆ
ಈಚೆಗೆ ಬರಬಹುದೇ ಈ ರಾಗ?
ಶಶಿಯ ವದನದ ಕಲೆಯ ಕಾಂತಿಯು
ಮೂಕಮನದಲಿ ಸ್ತಬ್ಧವಾಗಿದೆ
ಋಷಿಯ ಮೂಲದ ಮೂಲೆಯಲ್ಲಿ
ಕರಿಯ ಗುಡುಗಿನ ಶಬ್ಧವಾಗಿದೆ
ಕೇಳದ ಸಿಡಿಲಿಗೆ
ಏಳುವ ಅಣಬೆಯ
ಬಾಳನು ತೋರುವುದೇ ಈ ಭಾವ?
ವರ್ಣರಂಜಿತ ಮನದ ಪುಟಗಳ
ತಿಕ್ಕಿ ತಿಕ್ಕಿ ತೊಳೆಯಲಾಗಿದೆ
ವರುಣನಿಂಗಿತ ಅರಿತ ಮೇಘವು
ಬಿಕ್ಕಿ ಬಿಕ್ಕಿ ಅಳುವ ಹಾಗಿದೆ
ಸಣ್ಣ ಹನಿಯೂ
ಬಣ್ಣವಾಗಿ
ಕಣ್ಣ ಸೇರುವುದೇ ಈ ಚಿತ್ರ?
ಸ್ವಪ್ನದ ಲೋಕದ ರಾಗದ ಭಾವಕೆ ಕಣ್ಣಿನ ಶಬ್ದಕೆ
ಮಳೆಯಾಗಿದೆ
ಮಿಂಚಾಗಿದೆ
ಗುಡುಗಾಗಿದೆ..
ಅಂತೂ ಇಳೆ ಹಸಿಯಾಗಿದೆ, ಜೀವ ಖುಷಿಯಾಗಿದೆ.
Monday, January 11, 2010
ಕುರಿಯಾಗುವುದೆಂದರೆ....
ಸುಳ್ಳೆಲ್ಲವೂ
ಸತ್ಯ
ನಿರಪೇಕ್ಷ ಗೆದ್ದರೂ
ಸಾಪೇಕ್ಷಕ್ಕೇ ಜಯ
ಏಕೆಂದರೆ ನಿರಪೇಕ್ಷ
ಗೆದ್ದಿರುವುದೂ
ಸಾಪೇಕ್ಷತೆಯಲ್ಲೇ..
ಗೀತಾಚಾರ್ಯ ಹೇಳಿದ್ದೂ ಅದನ್ನೇ.
ಅಪ್ರಿಯವಾದ
ಸತ್ಯವೆಲ್ಲಾ
ಸುಳ್ಳು
ಬಹುಜನ ಪ್ರಿಯ ಸುಳ್ಳಿನಲ್ಲೇ
ಸತ್ಯದ ಜನನ
***
ಬೆಳಗ್ಗೆ ಬಂದ ಮಿಥ್ಯ
ಕರೆಯೊಂದಕ್ಕೆ
ಮರುಳಾಗಿ
ಕುರಿಯಾಗುವುದು
ಸುಳ್ಳಲ್ಲ.
ಆ ಮಿಥ್ಯಕ್ಕೆ ಹಚ್ಚಿದ ಬಣ್ಣ
ಕದಡುವವರೆಗೂ
ಸುಳ್ಳೂ ಸತ್ಯವೇ..
ಕದಡಿದ ನಂತರ
ಓಕುಳಿ.
***
ಕರೆ ಮಾಡಿ ಕುರಿಮಾಡಿದವನ
ಮಿಥ್ಯ ಸಂತೋಷಕ್ಕಿಂತ
ಕುರಿಯಾದವನ
ಬಣ್ಣಗಳೇ
ಹೆಚ್ಚು
ವರ್ಣಮಯ
ಕುರಿಮಾಡಿದವನ
ಕ್ಷಮೆಯಾಚನೆಗಿಂತ
ಆ ದಿನದ
ಸತ್ಯವಾದ
ಮಿಥ್ಯ ಸಂಭ್ರಮದ
ಕುರಿತಾಗಿ
ಕುರಿಯಾದವ
ಅರ್ಪಿಸಿದ ಧನ್ಯವಾದಕ್ಕೇ ಹೆಚ್ಚು
ಬೆಲೆ.
Wednesday, December 2, 2009
ಪ್ರೇಮ ಪ್ರಕಾಶನ
ಕಣ್ಣ ನೋಟದ ಬರವಣಿಗೆ ಭಾರೀ ಮಧುರ ಮೋಹಕ
ಭಾವ ಪುಟದ ಬಲತುದಿಗೆಲ್ಲಾ ನಿನ್ನ ಹೆಸರ ಅಂಕಿತ
ಸಣ್ಣ ಹಟದ ಪ್ರತಿಕೊನೆಯಲ್ಲೂ ಚಂದ ನಗುವ ಇಂಗಿತ
ಪರಿವಿಡಿಯ ಭಾಗಗಳೆಲ್ಲಾ ಬರೀ ಕನಸಿಗೆ ಮೀಸಲು
ಇರುಳಿಡಿಯ ರಾಗಗಳೆಲ್ಲಾ ನನ್ನ ನಿದಿರೆಗೆ ಕಾವಲು
ಒಂದುಕಡೆಯೂ ಪ್ರಯೋಗವಿಲ್ಲ ಬಳಸಿದಂತ ಪದಗಳ
ಇನ್ನೂಕೂಡಾ ಸುಯೋಗವಿಲ್ಲ ನನ್ನ ಹೃದಯ ಕಳವಳ
ಸುದ್ದಿಯೆಲ್ಲಾ ಮಾಡುವುದಿದೆ, ಮೊದಲು ಇದರ ಹಂಚಿಕೆ
ಸಧ್ಯದಲ್ಲೇ ಬಿಡುಗಡೆಗಿದೆ ಈ ಅಧರದಂಚಿನ ಸಂಚಿಕೆ
ಹಂಪಿ ತೇರಿನ ಚಕ್ರಗಳ ಅಡಿಯಲ್ಲಿ ಹುಲ್ಲು ಬೆಳೆಯಿಸುತ್ತಿದ್ದಾರೆ..
ಮಲ್ಲೆಶ್ವರಂ ಕಡೆಯಿಂದ ಮೆಜೆಸ್ಟಿಕ್ ಬರುವ ಸಮಯ.. ಬೆ.ಮ.ಸಾಂಸಂ ಎಂದು ಬೆನ್ನಿಗೆ ಬರೆಯಿಸಿಕೊಂಡ ನೀಲಿಬಣ್ಣದ ಹೊಸ ಬಸ್ಸಿನಲ್ಲಿಹೋಗುವ ಸಂಜೆಯ ಹೊತ್ತು.. ಅರ್ಧ ಟಿಕೆಟ್ಟನ್ನು ಜಗಳ ಮಾಡಿ ಪಡೆದ ಅಪ್ಪನ ಪಕ್ಕದಲ್ಲಿ ಮಗು ಖುಷಿಯಲ್ಲಿ ಕುಳಿತಿದೆ. ಅಪ್ಪ ಜಗಳ ಮಾಡಿ ವಿಜಯಿಯಾದ ಉತ್ಸಾಹದಲ್ಲಿ ಕಿಡಕಿಯ ಹೊರಗೆ ನಿಂತು ನಿಂತು ಇಣುಕುತ್ತದೆ..ಅವರ ಹಿಂದಿನ ಸೀಟಿನಲ್ಲಿ ಸುಮ್ಮನೆ ಹೊರಗೆ ಕಣ್ಣು ಎಸೆದು ತಮಗೆ ಇದ್ಯಾವುದೂ ಸಂಬಂಧವಿಲ್ಲದವರಂತೆ ಕಿವಿಯಲ್ಲಿ ಮೊಬೈಲಿನ ತಂತಿ ಸಿಕ್ಕಿಸಿ ಯಾರೋ ಕುಳಿತಿದ್ದಾರೆ....ಥಟಕ್ಕನೆ ಮಗು ಕಿರುಚುತ್ತದೆ.. "ಅಪ್ಪಾ ಅಲ್ನೋಡು.. ಆನೆ".. ಹಿಂದಿದ್ದವನು ಆಗಷ್ಟೆ ನಿದ್ದೆಯಿಂದ ಎಚ್ಚರ ಆದಂತೆ, ತಪಸ್ಸಿನ ಧ್ಯಾನ ಭಂಗವಾದಂತೆ "ಎಲ್ಲಪ್ಪ ಆನೆ" ಅಂತ ಕಣ್ಣರಳಿಸುತ್ತಾನೆ"..
ಅರೆ ಹೌದು.. ಆನೆ.. ಅರೆ ಪಕ್ಕದಲ್ಲಿ ಜಿಂಕೆ.. ನವಿಲು.. ಏನದು.. ಅಲ್ಲೇ ರಸ್ತೆ ಬದಿಯಲ್ಲಿ ಶಿಲಾಬಾಲಿಕೆ ನಿಂತಿದ್ದಾಳೆ.. ಕನ್ನಡಿಯಲ್ಲಿ ಮುಖ ನೋಡುತ್ತಾ ಮೈ ಮರೆತಿದ್ದಾಳೆ. ಪಕ್ಕದಲ್ಲೇ ಹಸಿರು ವನ.. ಅದರೊಳಗೆ ಒಬ್ಬ ರಾಕ್ಷಸನ ಮುಖ.. ಅವನ ಕಣ್ಣಿನ ಕಪ್ಪು ಕಾಡಿಗೆಯಲ್ಲಿ ವಿಚಿತ್ರ ಚಿತ್ತಾರ.. ಅವನು ಭಯ ಹುಟ್ಟಿಸುವುದಿಲ್ಲ. ಮಗು ರಾಕ್ಷಸನನ್ನು ನೋಡಿ ಬೆಚ್ಚುವುದಿಲ್ಲ.. ಸ್ವಲ್ಪ ಮುಂದೆ ಯಕ್ಷಗಾನದ ಕಿರೀಟ.. ನೋಡುಗರಿಗೆ ಅರ್ಥವಾಗಲಿ ಎಂದು ಅದರ ಕೆಳಗೆ ಯಕ್ಷಗಾನ ಎಂದು ಬರೆಯಲಾಗಿದೆ. ಅದನ್ನು ಓದಲು ಮಗು ಅಪ್ಪನ ಸಹಾಯ ಪಡೆದಿದೆ..ಚೂಪು ಚೊಂಚಿನ ಹಕ್ಕಿಯೊಂದು ಕುಳಿತ ಕೊಂಬೆಯ ಮರ ಕಾಂಪೌಂಡು ಮುಗಿದ ಕಾರಣದಿಂದ ಅರ್ಧಕ್ಕೆ ನಿಂತುಬಿಟ್ಟಿದೆ. ಅದಕ್ಕೇನೂ ಬೇಸರ ಮಾಡಿಕೊಳ್ಳದೆ ಸಂಗೀತಗಾರನೊಬ್ಬ ವೀಣೆ ನುಡಿಸುತ್ತಲೇ ಇದ್ದಾನೆ. ಅವನ ಮುಖದಲ್ಲಿನ ಗಂಭೀರತೆ ನೋಡಿದ ನಾಟ್ಯರಾಣಿ ಹೆಜ್ಜೆ ತಪ್ಪಿದಂತೆ ಕಾಣುತ್ತಾಳೆ. ಅಪ್ಪ ಮಗನ ಎದುರು ಸೀಟಿನಲ್ಲಿ ಕೂತ ದಪ್ಪ ಕನ್ನಡಕದ ಯುವಕನೊಬ್ಬ ’ಟೈಮ್ಸ್ ಆಫ್ ಇಂಡಿಯಾ’ದಲ್ಲಿ ಹುದುಗಿಸಿದ ಮುಖ ತೆಗೆದು ಆಚೀಚೆ ನೋಡಿ ಮತ್ತದರಲ್ಲೇ ಹುದುಗಿಸಿದ್ದಾನೆ.
ಹಾದಿ ಪಕ್ಕದ ಭಿತ್ತಿಗಳಲ್ಲಿ ಪತ್ರಗಳಿಲ್ಲ.. ಚಿತ್ರಗಳಿವೆ.. ಬೆಂಗಳೂರನ್ನು ಬೃಹತ್ಗೊಳಿಸಲು ಹೊರಟಿರುವ ಮಹಾನಗರಪಾಲಿಕೆ ಮೆಜೆಸ್ಟಿಕ್ಕಿನ ರಸ್ತೆಯ ಇಕ್ಕೆಲಗಳಲ್ಲಿ ಆರ್ಟ್ ಗ್ಯಾಲರಿಯೊಂದರ ನಿರ್ಮಾಣದ ಹಂತದಲ್ಲಿದೆ. ಕೆಂಪೇಗೌಡ ಬಸ್ ನಿಲ್ದಾಣ ತಲುಪುವ ಹಲವು ಹಾದಿಗಳ ಇಬ್ಬದಿಯ ಗೋಡೆಗಳ ಮೇಲೆ ಸೃಜನಾತ್ಮಕ ಕಲಾಕೃತಿಗಳನ್ನು ಬಣ್ಣಗಳಿಂದ ಬರೆಯಿಸಲಾಗಿದೆ.. ಬರೆಯಿಸಲಾಗುತ್ತಿದೆ. ಮೊದಲೆಲ್ಲಾ ಸುಣ್ಣ ಬಳಿದಿದ್ದ ಗೋಡೆಗಳು ಉಗುಳುವವರ,ಅಂಟಿಸುವವರ, ಗೀಚುವವರ ಕಾರಣ ಅಂದಗೆಟ್ಟಿದ್ದವು.. ಈಗ ಸ್ವಚ್ಛತೆಯ ಜೊತೆಗೆ ಸುಂದರತೆಯೂ ಇರಲೆಂದು ಪಾಲಿಕೆ ಈ ಕಾರ್ಯ ಕೈಗೊಂಡಿದೆ. ಹೊರಗಿನಿಂದ ಅಪರೂಪಕ್ಕೆ ಬರುವವರಿಗೆ ’ಹಿಂದಿನ ಸಲ ಬಂದಾಗ ಇದಿರಲಿಲ್ಲ’ ಅನಿಸಿದರೆ, ಬೆಂಗಳೂರಲ್ಲೇ ಇದ್ದು ಆ ಕಡೆ ಹೋದವರಿಗೆ ’ಏನೋ ಒಂದ್ ಒಳ್ಳೆ ಕೆಲ್ಸ ಆಗ್ತಾ ಇದೆ’ ಅನಿಸುತ್ತದೆ. ಉದ್ಯಾನ ನಗರಿಯ ಅಂದ ಸವಿಯಲು ಬಂದವರಿಗೆ ರಸ್ತೆಯ ಎರಡೂ ಬದಿಗಳು ಸ್ವಾಗತಿಸುತ್ತವೆ.. ಸಚಿತ್ರವಾಗಿ...
ಆ ಗ್ಯಾಲರಿಗಳಲ್ಲಿ ಕರ್ನಾಟಕವಿದೆ.. ಕನ್ನಡವಿದೆ.. (ಕೆಲವೊಂದು ಕಡೆ ಸರಿಯಾಗಿಲ್ಲ!)..ಏನೇನೂ ಸಂಬಂಧವಿರದ ಹಲವು ಚಿತ್ರಗಳು ಅಕ್ಕ ಪಕ್ಕದಲ್ಲಿ ಕೂತು ಹರಟೆ ಹೊಡೆಯುತ್ತವೆ. ರಾಜಸ್ಥಾನದ ಒಂಟೆಗಳೂ ಮಂಡ್ಯದ ಕುರಿಮರಿಯೂ ಒಂದೇ ಕೆರೆಯ ನೀರು ಕುಡಿಯುತ್ತವೆ.. ಸರಣಿ ಚಿತ್ರಗಳು ರಸ್ತೆಯ ಪಕ್ಕದಲ್ಲಿ ಮಾರಾಟಕ್ಕೆ ಕೂತವರ ಆಸೆ ಕಂಗಳಂತೆ ನಮ್ಮನ್ನೇ ನೋಡುತ್ತವೆ.. ಈಗ ಒಣ ಗೋಡೆಗಳಲ್ಲಿ ಸಂತೋಷವಿದೆ.. ಪಯಣಿಗರಲ್ಲಿ, ದಾರಿಹೋಕರಲ್ಲಿ ಇವೆಲ್ಲಾ ಇಷ್ಟುದಿನ ಎಲ್ಲಿದ್ದವು ಎಂಬ ಕುತೂಹಲವಿದೆ... ಕಾರಿನ ಕಪ್ಪು ಗಾಜಿನಲ್ಲಿ ನೋಡುವ ಜನಕ್ಕೆ ಟೂರಿಗೆ ಹೋಗಿ ಇವನ್ನೆಲ್ಲಾ ನೋಡಿ ಮಜಾ ಮಾಡಲು ರಜೆ ಮಂಜೂರು ಮಾಡದಿರುವ ಮ್ಯಾನೇಜರ್ ಮೆಲೆ ಸಿಟ್ಟಿದೆ.. ಇವನ್ನೆಲ್ಲಾ ಇಂಟರ್ ನೆಟ್ ನಲ್ಲಿ ಒಂದು ಕ್ಲಿಕ್ಕಿನಲ್ಲಿ ನೋಡಬಹುದೆಂಬ ಹುಂಬತನವಿದೆ..
ಚಿತ್ರಗಳು ಮುಗಿಯುತ್ತಲೆ ಇಲ್ಲ.. ಮಗು ಕಣ್ಣುಗಳನ್ನು ದೊಡ್ಡದು ಮಾಡುತ್ತಲೇ ಇದೆ.. "ಅಪ್ಪಾ ಅದು ಆ ನೀಲಿ ಹಸಿರು ಬಣ್ಣದ ಹಕ್ಕಿ ಹೆಸರೇನು ?" ಜೀವನದಲ್ಲಿ ಕಾಗೆಯೊಂದನ್ನೇ ನೋಡಿ ಜಗತ್ತೇ ಕಪ್ಪು ಬಿಳುಪು ಎಂಬ ನಿರ್ಧಾರಕ್ಕೆ ಬಂದವನ ಹಾಗೆ ಮುಖ ಮಾಡಿ " ಯಾವ್ದೋ ಕಾಡು ಹಕ್ಕಿ" ಎನ್ನುತ್ತಾನೆ.. ಮಗು ಆ ಕಾಡು ಹಕ್ಕಿಯ ಮರೆತು ಜೋಡಿ ಚಿರತೆಗಳ ಚಿತ್ರದಲ್ಲಿ ಎರಡು ಬಾಲ ಎಲ್ಲಿದೆ ಎಂದು ಹುಡುಕತೊಡಗುತ್ತದೆ.. ಆ ಪ್ರಶ್ನೆ ಕೇಳಿಸಿಕೊಂಡ ಡ್ರೈವರ್ ಹಿಂದಿನ ಸೀಟಿನ ಹಿಂದಿನ ಇನ್ನೊಬ್ಬ ಈಗ ಆ ಹಕ್ಕಿ ಹೆಸರೇನಿರಬಹುದು ಎಂದು ಯೋಚಿಸುತ್ತಿದ್ದಾನೆ.. ಗೊತ್ತಾಗುವುದಿಲ್ಲ.. ನಾಳೆ ಆಫೀಸಿನಲ್ಲಿ ಗೂಗಲ್ ಮಾಡಿದರಾಯ್ತು ಎಂದು ಸಮಾಧಾನ ಮಾಡಿಕೊಳ್ಳುತಾನೆ ..ಕಂಡಕ್ಟರ್ ಹಿಂದಿನ ಬಸ್ ಸ್ಟಾಪಿನಲ್ಲಿ ಸರಿಯಾಗಿ ಸೀಟಿ ಊದಲಿಲ್ಲ ಎಂದು ಹೆಂಗಸೊಬ್ಬಳು ಗೊಣಗುತ್ತಾ ಮುಂದಿನ ಸ್ಟಾಪಿನಲ್ಲಿ ಇಳಿಯುತ್ತಾಳೆ. ಅವಳ ಕಂಕುಳಲ್ಲಿದ್ದ ಮಗನೂ ಭಿತ್ತಿಚಿತ್ರಗಳನ್ನು ನೋಡುವುದರಲ್ಲಿ ಮಗ್ನನಾಗಿದ್ದಾನೆ
ಮೊದಲು ಅಲ್ಲೆಲ್ಲಾ ಬೇರೆಯೇ ಇತ್ತು. ಯಾರ್ಯಾರದ್ದೋ ಹುಟ್ಟುಹಬ್ಬಕ್ಕೆ ಯಾರ್ಯಾರೋ ಶುಭಾಶಯ ಕೋರಿದ ವಿವರಗಳು.. ಅಜ್ಞಾತ ಚಿತ್ರದ ಅಜ್ಞಾತ ನಾಯಕಿಯ ಭಂಗಿಗಳಿದ್ದವು.. ಅಖಿಲ ಒಕ್ಕೂಟಗಳ ಸಕಲ ಕಾರ್ಯಕಲಾಪಗಳು, ಧರಣಿಗಳು ಗೋಡೆ ತುಂಬಿದ್ದವು.. ಹೊಸದಾಗಿ ಬಂದವರಿಗೆ ಯಾವುದೋ ಕಾಲೇಜಿನ ಕೀಲಿ ಕಳೆದು ಹೋದ ಹಳೇ ನೋಟೀಸ್ ಬೋರ್ಡಿನ ಹಾಗೆ ಕಾಣುತಿದ್ದವು.. ’ಇಲ್ಲಿ ಭಿತ್ತಿಪತ್ರ ಅಂಟಿಸಿದವರಿಗೆ ಕಠಿಣ ಶಿಕ್ಷೆ ವಿಧಿಸಲಾಗುವುದು’ ಎಂಬ ವಾಕ್ಯವೇ ಸಾಕಾಗಿತ್ತು ಗೋಡೆಯ ಅಂದ ಹಾಳು ಮಾಡಲು.. ಕೆಲವಂತೂ ದೇವರ ಚಿತ್ರಗಳನ್ನು ಹೊತ್ತು ’ಹಾದಿಮೂತ್ರಿಕ’ರ ವಿರುದ್ಧ ಹೋರಾಡುತ್ತಿದ್ದವು. ಈಗ ಅದೇ ಗೋಡೆಗಳು ಹೊಸ ಮದುವೆಯಾದವರಂತೆ ಫಳಗುಡುತ್ತಿವೆ.. ತಮ್ಮ ಬಣ್ಣಗಳನ್ನು ನೋಡಿ ತಾವೇ ನಾಚಿವೆ.. ಹೋಗಿಬರುವವರೆಲ್ಲಾ ತಮ್ಮನ್ನು ನೋಡಲಿ ಎಂದು ರಸ್ತೆಯ ಅಂಚಿನವರೆಗೆ ಎದೆ ಉಬ್ಬಿಸಿ ನಿಂತಿವೆ.. ಅವುಗಳಿಗೀಗ ಪಾಲಕರಿಗೆ ತೇರಿನಲ್ಲಿ ಕಳೆದು ಹೋದ ಮಗ ಮನೆಗೆ ಬಂದಷ್ಟೇ ಸಂತಸವಾಗಿದೆ.
ಗೋಡೆಯ ಮೇಲಿನ ಚಿತ್ರಗಳು ಸ್ಥಬ್ದವಾಗಿದ್ದರೂ ನಮ್ಮೊಡನೆ ಅವು ಚಲಿಸುತ್ತಿರುವಂತೆ ಭಾಸವಾಗುತ್ತಿದೆ. ಚಿತ್ರಮಂದಿರದ ಸಿನಿಮಾ ರೀಲುಗಳಂತೆ ಗಿರಿ ಗಿರಿ ತಿರುಗುವಂತೆ ಕಾಣುತ್ತಿವೆ. ಈಗಷ್ಟೇ ಕೆತ್ತಿಟ್ಟಿರುವ ಪ್ರತಿಮೆಗಳ ಹೊಳಾಪಿದೆ ಅವಕ್ಕೆ.. ಕೆಲವು ಅಪೂರ್ಣ ಚಿತ್ರಗಳು ಕಲಾವಿದನಿಗಾಗಿ ಕಾಯುತ್ತಿರುವಂತೆ ಕಂಡರೆ ಇನ್ನೂ ಕೆಲವು ತಮ್ಮಷ್ಟಕ್ಕೆ ತಾವೇ ಪೂರ್ಣಗೊಳ್ಳುವ ಲಕ್ಷಣಗಳನ್ನು ತೋರುತ್ತಿವೆ... ಈಗ ಬಸ್ಸು ಮೇಲ್ಸೇತುವೆ ಹತ್ತುತ್ತಿದೆ.. ಅರೆ ಇಲ್ಲಿ ಮತ್ತೆ ಚಿತ್ರಗಳು.. ಗೋಲಗುಮ್ಮಟದ ಪಕ್ಕದಲ್ಲೇ ಮೈಸೂರು, ಐಹೊಳೆಯ ಪಕ್ಕದಲ್ಲಿ ನಾಗರ ಹೊಳೆ.. ಹುಲಿಯ ಪಕ್ಕದಲ್ಲೇ ಗಿಳಿ.. ಮಗುವಿನ ಜೊತೆ ಇನ್ನೂ ಹಲವರು ಕಿಡಕಿಯ ಹೊರಗೆ ಇಣುಕುತ್ತಿದ್ದಾರೆ.. ಸರಿಯಾಗಿ ಕಾಣದ ಒಂದಿಬ್ಬರು ಕತ್ತುದ್ದ ಮಾಡುತ್ತಾ ಕಿಡಕಿಯ ಬಳಿ ಕೂತಿದ್ದವರ ಮೈಮೇಲೆ ಬಿದ್ದು ಬೈಸಿಕೊಂಡಿದ್ದಾರೆ.. ಈಗ ಕನ್ನಡದ ಕವಿಗಳು ಮದುವೆ ಮನೆಯ ಪಂಕ್ತಿ ಊಟಕ್ಕೆ ಕೂತವರಂತೆ ಸಾಲಿನಲ್ಲಿ ಆಸೀನರಾಗಿದ್ದಾರೆ. ಬೇಂದ್ರೆ ಅಜ್ಜನ ನೆರೆತ ಕಿವಿಯ ಕೂದಲುಗಳು ಕಾರ್ನಾಡರ ಮುಖಕ್ಕೆ ಕಚಗುಳಿಯಿಡುತ್ತಿವೆ.. ಇದ್ದಕ್ಕಿದ್ದಂತೆ ಅಲ್ಲಿ ಸಿದ್ಧಿ ಜನಾಂಗದ ಮಹಿಳೊಯೊಬ್ಬಳ ಆರ್ತ ಮುಖ ಪ್ರತ್ಯಕ್ಷವಾಗುತ್ತದೆ.. ರೈತನೊಬ್ಬ ಮೇಕೆಗೆ ಹುಲ್ಲು ತಿನಿಸುವ ದೃಶ್ಯ, ಜನಪದ ವಾದ್ಯವೊಂದರ ಗುಂಗಿನಲ್ಲಿ ಹೊಳೆಬದಿ ಕೂತ ಹುಡುಗನೊಬ್ಬನ ನೋಟ, ಸುಗ್ಗಿ ಕುಣಿತದ ಹಳದಿ ಕೆಂಪು ತುರಾಯಿಗಳ ತುರುಬುಗಳು ’ನಮ್ಮನ್ನು ಕಾಪಾಡಿ’ ಎಂದು ಗೋಗರೆಯುತ್ತವೆ. ಒಟ್ಟಿನಲ್ಲಿ ಫ್ಲೈ ಓವರ್ ದಾಟುವಷ್ಟರಲ್ಲಿ ಬೇರೆ ಬೇರೆ ಕಿರುಚಿತ್ರಗಳ ತುಣುಕು ಪ್ರದರ್ಶನವೊಂದರಲ್ಲಿ ಭಾಗವಹಿಸಿ ಬಂದ ಅನುಭವವಾಗುತ್ತದೆ.
ಹಂಪಿ ತೇರಿನ ಚಕ್ರಗಳ ಅಡಿಯಲ್ಲಿ ಹುಲ್ಲು ಬೆಳೆಯಿಸುತ್ತಿದ್ದಾರೆ.. ಅಲ್ಲಿ ಕನಸಿನ ಹಂಬಲವಿದೆ.. ಹೊಸ ಹುರುಪಿದೆ.. ಕಲ್ಲಾವಿದನ ಕಣ್ಣಿನ ಬಣ್ಣಗಳವು.. ಅವರ ಬದುಕಿನ ರೇಖೆಗಳು.. ಅಲ್ಲಿ ಸುಂದರ ನಗರದ ಕಲ್ಪನೆಯಿದೆ... ಸಾಮ್ರಾಜ್ಯಗಳ ವೈಭವವಿದೆ.. ತೇರಿನ ಗಲಾಟೆಯಿದೆ.. ಹಸಿರಿದೆ.. ಆ ಹಸಿರಲ್ಲಿ ಉಸಿರಾಡುವ ನಾವಿದ್ದೇವೆ.. ಬದುಕಿನ ಚಕ್ರದಡಿಯ ಗೊಂದಲಗಳಲ್ಲಿ ಕೊಸರಾಡುತ್ತಿದ್ದೇವೆ.. ಇನ್ನೂ ಉಸಿರಾಡುತ್ತಿದ್ದೇವೆ.. ಉಸಿರು ಅಮರವಾಗಲೆಂಬ ಪುಟ್ಟ ಆಶಯವಿದೆ...ಆ ಬಣ್ಣಗಳಲ್ಲಿ ಸುವಾಸನೆ ಇದೆ.. ಪೇಂಟರ್ ನ ಹಳೇ ಬ್ರಷ್ಶಿನ ಜುಮುರಿದೆ... ಅವು ಅಂಟಿಗೊಳ್ಳುತ್ತವೆ... ಗೋಡೆಯ ಬಿರುಕನ್ನೂ ತಾಜಮಹಲಿನ ಕಮ್ಮಾನು ಮಾಡುವ ಶಕ್ತಿಯಿದೆ.. ಅವು ನಮ್ಮದೇ ಆಕೃತಿಗಳು..ನಮ್ಮದೇ ಗುಣವಿದೆ ಅವಕ್ಕೆ.. ಅವು ನಮ್ಮ ಪ್ರತಿಬಿಂಬಗಳಾಗುತ್ತವೆ.. ಗೋಡೆಗಳು ಕನ್ನಡಿಗಳಾಗುತ್ತವೆ.... .. ಈ ಚಿತ್ರಗಳು ಜೀವಂತ ರೂಪಕಗಳು..
ಎಲ್ಲರೂ ಬಸ್ಸು ಇಳಿಯುವ ಆತುರದಲ್ಲಿದ್ದಾರೆ.. ಓಡುವ ಬಸ್ಸಿನಿಂದ ಇಳಿದು ಮುಗ್ಗರಿಸಿದಂತಾಗಿ, ಅಲ್ಲೇ ಸುಧಾರಿಸಿಕೊಂಡು ಯಾರಾದರೂ ನೋಡಿಬಿಟ್ಟರೋ ಎಂದು ಸುತ್ತ ಮುತ್ತ ಕಣ್ಣಾಯಿಸಿ ತಮ್ಮ ಪಾಡಿಗೆ ಹೋಗುತ್ತಿದ್ದಾರೆ.. ಅವರೆಲ್ಲರೂ ಇನ್ಯಾವುದೋ ಬಸ್ ಹತ್ತಿ ಮನೆಗೆ ಹೋಗುವ ತರಾತುರಿಯಲ್ಲಿದ್ದಾರೆ.. ಹಾಗೆ ಹೋಗುವಾಗ ಮತ್ತೆ ಈ ಚಿತ್ರಸಂತೆಯಲ್ಲಿ ಓಡಾಡುವ ಖುಷಿಯಲ್ಲಿದ್ದಾರೆ.. ಕೆಲವರು ಟಿಕೆಟಿನ ಹಿಂಬದಿಯ ಕಂಡಕ್ಟರ ಬ್ರಹ್ಮ ಲಿಪಿ ಓದಲಾಗದೆ ಅವನು ಕೊಟ್ಟಷ್ಟು ಕಿಸೆಯಲ್ಲಿ ಹಾಕಿಕೊಂಡು ಬಡಬಡ ನಡೆಯುತ್ತಿದ್ದಾರೆ. ಅದನ್ನೂ ಮರೆತ ಇನ್ನೂ ಕೆಲವರು ಹತ್ತಿರದ ಎ.ಟಿ.ಎಂ ಗೆ ನುಗ್ಗಿ ಮಿನಿ ಸ್ಟೇಟ್ ಮೆಂಟ್ ತೆಗೆದು ಪದೇ ಪದೇ ಓದುತ್ತಿದ್ದಾರೆ.. ಅಪ್ಪ ಮಗ ಇಬ್ಬರೂ ಓವರ್ ಬ್ರಿಡ್ಜಿನ ಮೆಟ್ಟಿಲೇರುತ್ತಿದ್ದಾರೆ. ಕೆಂಪು ಲಂಗ ತೊಟ್ಟ ಹೆಂಗಸೊಬ್ಬಳು ಧಡಾರನೆ ಅವರ ಮುಂದೆ ಬಿದ್ದು ಒದ್ದಾಡುತ್ತಾಳೆ.. ’ಅಯ್ಯಾ ಅಮ್ಮಾ’ ಎಂದು ಕೈ ಮುಂದೆ ಮಾಡುತ್ತಾಳೆ.. ಬ್ರಿಡ್ಜಿನ ಆ ತುದಿಗೆ ಕಲಾವಿದನೊಬ್ಬ ಈಗಷ್ಟೇ ಬಂದು ಕೂತು ಹೊಸ ಚಿತ್ರದ ರಚನೆಯಲ್ಲಿದ್ದಾನೆ.. ಅವನ ಕುಂಚಗಳಲ್ಲಿ ಈಗ ಆ ಹೆಂಗಸಿನ ಮುಖ ಮೂಡಬಹುದೆಂಬ ಆಸೆಯಿಂದ ಆ ಪೋರ ಅರ್ಧದಾರಿಯಲ್ಲೇ ನಿಂತು ಮಿಕಿ ಮಿಕಿ ನೋಡುತ್ತಿದ್ದಾನೆ.
Saturday, April 25, 2009
ಗಡ್ಡ
ಅರ್ಧ ತೆರೆದ ಕಿಟಕಿಯಲ್ಲಿ
ಬಿಕ್ಕಳಿಸುವ ನಕ್ಷತ್ರಗಳು ಬಸ್ಸಿನಷ್ಟೇ
ವೇಗವಾಗಿ ಬರುತ್ತಿವೆ..
ಪಕ್ಕದ ಕರೀ ಟೀ-ಶರ್ಟಿನ,
ಇನ್ನೂ ಗಡ್ಡ ಸರಿಯಾಗಿ ಬರದ
ಮುಖದ
ಮೇಲೆ ಗುಮಾನಿ
ನನ್ನ
ಜೀನ್ಸ್ ಪ್ಯಾಂಟಿನ ಜೇಬಲ್ಲಿದ್ದ ಪರ್ಸ್
ಅಂಗಿ ಕಿಸೆಗೆ ಬರುವಷ್ಟು
ಅವನ ಹೆಡ್ ಫೋನಿನ
ಧ್ವನಿ ಬೇಡ ಬೇಡವೆಂದರೂ ಕಿವಿಗೆ
ಬಡಿದು
ಅಲವರಿಕೆಯಾಗುತ್ತಿದೆ, ಯಾವುದೋ
ಹಾಳು ಪದ್ಯ
ಗಾಳಿಗೆಂದು ಸರಿಸಿದ
ಕಿಟಕಿಯ ಕೆಂಪು ಕರ್ಟನ್
ಬಿಳೀ ಟ್ಯೂಬ್ ಲೈಟ್ಗಳ
ಬೆಳಕು ಹೀರಿ ವಾತಾವರಣವನ್ನು
ಉಗ್ರವಾಗಿಸಿದೆ...
ಊಟಕ್ಕೆ ನಿಲ್ಲಿಸಿದ
ಬಸ್ಸಿನಿಂದಿಳಿದ ಅವನ
ಸೀಟನ್ನು
ಪದೇ ಪದೇ ನೋಡುತ್ತಿದ್ದೆ.
ಅವನ ಬ್ಯಾಗು, ಒಂದು ಕರ್ಚೀಪು
ಒಂದು ಬಿಸ್ಲೇರಿ ಬಾಟಲಿ
ಮತ್ತೆ ಕಾಲು ನೀಡುವಾಗ
ತಾಗಿದ ಅವನ ಬೆರಳು
ಸುಮಾರು ದಿನವಾದರೂ
ಕತ್ತರಿಸದ ಅವನ ಬೆರಲನ್ನು
ಪರಿಚಯಿಸಿತು..
ನನ್ನ ದೊಡ್ಡ
ಬ್ಯಾಗಿನ ಮೇಲೆ, ಅಡಿಡಾಸ್ ಶೂಗಳ
ಮೇಲೆ ಕಣ್ಣಿಟ್ಟೇ
ರೊಯ್ಯನೆ ಒಳಬರುವ ಗಾಇಗೆ ಕಿವಿ
ಮುಚ್ಚಿದೆ..
ಬೆಳಗಾಯಿತು..
ಅವನೆದ್ದ..
ನಾನಲ್ಲೇ ಇದ್ದೆ..
ಅವನ ಸೀಟಿನಿಂದ
ಐನೂರರ ನೋಟೆತ್ತಿಕೊಂಡಿದ್ದು
ಅದರಲ್ಲಿರುವ ಗಾಂಧೀಜಿ
ಫೋಟೋ ನೋಡೀ ಮಾತ್ರ..
ತೇರಿಗೆಂದು ಊರಿಗೆ ಹೊರಟ
ನನಗೆ ತೇರಿನಲ್ಲಿ
ಎಷ್ಟೋ ಜನ ಸಿಕ್ಕರು..
ಅವನೂ ಸಿಗಬಹುದು..
ಈಗ ಗಡ್ಡ ಬಂದಿರಬಹುದು..
ಅದು ನನಗೆ ಚುಚ್ಚಬಹುದು..
Wednesday, April 8, 2009
ಅರ್ಥ
Tuesday, April 7, 2009
ವಿಯೋಗ
Tuesday, March 17, 2009
ನೆರಳು
Friday, March 13, 2009
ವರ್ಣ
Saturday, January 31, 2009
ರಾತ್ರಿ, ನೀನು ಮತ್ತು ನಾನು
Thursday, January 1, 2009
ಹೊಸ ಸಂವತ್ಸರ
ಮುಂಜಾನೆಯ ಮಂಜಿನಲಿ ಇಬ್ಬನಿಯ ದಿಬ್ಬದಲಿ ಬಳಿಗೆ ಬಂದಿದೆ ಹೊಸ ವರುಷ...
ಚುಮು ಚುಮು ಚಳಿಯಲ್ಲಿ ನಿಮಗೆಲ್ಲ ತರಲಿ ಬೆಚ್ಚಗಿನ ಹೊಸ ಹರುಷ...
ಹೊಸ ಸಂವತ್ಸರದ ಹಾರ್ದಿಕ ಶುಭಾಶಯಗಳು...
ನಾಳೆ ಮನೆಗೆ ಹೊರಟಿದ್ದೇನೆ.. ಇನ್ನು ಹದಿನೈದು ದಿನ ರಜಾ..
ಮತ್ತೆ ಸಿಗೋಣ....
Tuesday, December 30, 2008
ಕಾರ್ವರ್ ಬರೆದ "ಕ್ಯಾಥೆಡ್ರಲ್"
"ಅದರಲ್ಲಿ ಒಬ್ಬ ಸೈನಿಕನ ಹೆಂಡತಿಯಾಗಿ ಇರುವುದು ಅಂದರೇನು ಎಂಬ ಭಾವ ಇರುವುದು ಎಲ್ಲ ಹೇಳಿದ್ದಳಂತೆ. ಬಹುಶ ಆ ಕವನವನ್ನು ಅವಳು ಪೂರ್ತಿಯೇ ಮಾಡಿಲ್ಲ.."
ಸ್ತ್ರೀ ಯ ರಹಸ್ಯದ ಬಗ್ಗೆ ಕಾಳಿದಾಸನೂ ಇದೇ ಮಾತನ್ನು ಹೇಳುತ್ತಾನೆ.. ಎಷ್ಟೋ ಕವಿಗಳೂ ಇದೇ ಅಭಿಪ್ರಾಯವನ್ನು ಮಂಡಿಸಿದ್ದಾರೆ.. ಅದು ಕೇವಲ ಕುರುಡನೊಬ್ಬನಿಗಾಗಿ ಕಥೆಯಲ್ಲಿ ಪ್ರಸ್ತಾಪಿಸಿದರೂ ಒಳಾರ್ಥದಲ್ಲಿ ಎಲ್ಲರನ್ನೂ ಕುರಿತಾಗಿದೆ ಎಂದೆನಿಸಿತು..
"ಅವಳ ಕೊನೆಯ ಯೋಚನೆ ಇದೆ ಇರಬಹುದು, ತನ್ನ ಗಂಡನಿಗೆ ತಾನು ಹೇಗಿದ್ದೆನೆಂದೂ ತಿಳಿದಿಲ್ಲವಲ್ಲ ಅಂತ. ಪಾಪ."
ಈ ವಾಕ್ಯ ಗೊಂದಲವನ್ನುಂಟುಮಾಡಿತು.. ಹೆಂಗಸರ ಮನಸ್ಸು ಸೂಕ್ಷ್ಮವಾಗಿರುತ್ತದೆ.. ಅವರ ಭಾವುಕತೆ ಕೆವಲ ಮೂರ್ತ ರೂಪಕ್ಕೆ ಸೀಮಿತವಾದುವುದಲ್ಲ.. ಹೀಗಾಗಿ ಈ ವಾಕ್ಯದ ಅಗತ್ಯವಿರಲಿಲ್ಲ ಎಂದೆನಿಸುತ್ತದೆ.. ಲೇಖಕರು ಹೆಣ್ಣಿನ ಮನಸ್ಸಿಗೆ ನ್ಯಾಯ ಸಲ್ಲಿಸಿಲ್ಲ ಎಂದೆನಿಸುತ್ತದೆ..ತನ್ನನ್ನು ಒಳಗಣ್ಣಿನಿಂದ ಅರ್ಥಮಾಡಿಕೊಂಡರೆ ಸಾಕೆನಿಸಬೇಕಿತ್ತು.. ಬಹುಶ: ಆ ದೇಶದ ಸಂಸ್ಕೃತಿಗೆ ಇದು ಸರಿಹೋಗುವುದೇನೋ..
" ಸೇದಿ ಹೊರಕ್ಕೆ ಬಿಟ್ಟ ಹೊಗೆ ಲಯಲಯವಾಗಿ ಸಾಗುವ ಲಹರಿಯನ್ನು ಅವರು ನೋಡಲಾಗುವುದಿಲ್ಲವಲ್ಲ! ಅದಕ್ಕಿರಬಹುದು "
ವಾಕ್ಯದಲ್ಲಿ ಸಿಗರೇಟು ಸೇದುವವರು ಕೆವಲ ಹೊಗೆ ಹೊರಬರುವ ಚಂದ ನೋಡಲು ಮಾತ್ರ ಸೇದುತ್ತರೇನೋ? ನಾನಂತೂ ಸೇದಿಲ್ಲಪ್ಪಾ..
"ನನ್ನತ್ರ ಎರಡು ಟಿ.ವಿ. ಇದೆ. ಒಂದು ಕಲರ್ರು ಇನ್ನೊಂದು ಓಬಿರಾಯನ ಕಾಲದ ಬ್ಲಾಕ್ ಅಂಡ್ ವೈಟು."
ಈ ವಾಕ್ಯದಲ್ಲಿ ಹೆಳ ಹೊರಟಿರುವ ವಿಚಿತ್ರ ಅರ್ಥವಾಗಲಿಲ್ಲ.. ಕುರುಡನಿಗೇಕೆ ಎರಡು ಟಿ.ವಿ... ಅದೂ ಕಲರ್ ಮತ್ತೊಂದು ಬ್ಲಾಕ್ ಅಂಡ್ ವೈಟ್.. ನನಗನ್ನಿಸಿದ್ದು.. ಬಹುಶಃ ಕುರುಡನ ಆಶಾವಾದಕ್ಕೆ ಪೂರಕವಾಗಿ ಸೇರಿಸಿರಬಹುದು.. ಕುರುಡನಾದರೂ ಜೀವನವನ್ನು ಅತಿಯಾಗಿ ಪ್ರೀತಿಸುವಾಗ ಇಂತಹ ಅನವಶ್ಯಕ ವಿಚಾರಗಳಿಗೂ ಮನಸ್ಸು ವಿಶೇಷ ಪ್ರಾಮುಖ್ಯತೆ ಕೊಡುತ್ತದೆ...
"ನನಗೆ ಎಲ್ಲದರಲ್ಲೂ ಕಲಿಯಲು ದೊರೆಯುತ್ತೆ. ಲರ್ನಿಂಗ್ ನೆವರ್ ಎನ್ಡ್ಸ್ . ಈಗ ಕೂಡ ಏನಾದರೂ ಕಲಿಯಲು ಸಿಗಬಹುದು. ನಾನು ಕಿವಿಗೊಡುತ್ತೇನೆ"
ಇದು ಉತ್ತಮ ಪುರುಷನ ಲಕ್ಷಣಗಳಲ್ಲೊಂದು.. ಸದಾ ಕಲಿಯುವ ಹಂಬಲ..ಇತ್ಯಾದಿ ಬೇಗ ಅರ್ಥವಾಗುತ್ತದೆ..!!!
"ತಮ್ಮ ಇಡೀ ಬದುಕಿನ ಶ್ರಮವನ್ನು ಅದರಲ್ಲಿ ತೊಡಗಿಸಿ ಅವರ ಶ್ರಮದ ಫಲಿತಾಂಶ ಕಾಣಲು ಅವರು ಇರುವುದಿಲ್ಲ."
ಫಲಿತಾಂಶದ ನಿರೀಕ್ಷೆಯಿಲ್ಲದೆ ತಮ್ಮ ಕರ್ತವ್ಯವನ್ನು ಮಾಡಿ ಮುಗಿಸುವ ವ್ಯಕ್ತಿತ್ವದ ಜನರನ್ನು ಪರಿಚಯಿಸುತ್ತಾ ಕುರುಡ ಈ ಮಾತನ್ನು ಹೇಳುವಾಗ ಅವನ ಅಂತರಂಗದಿಂದ ನೋಡುವ ಪರಿಯನ್ನು ಪರಿಚಯಿಸುತ್ತದೆ...
"ಇಲ್ಲ ನನಗೆ ನಂಬಿಕೆ ಇಲ್ಲ... ಯಾವುದರಲ್ಲೂ.."
ನಿರೂಪಕರ ಈ ಗುಣ ಒಳ್ಳೆಯದಲ್ಲ.. ಇದರಿಂದ ಹೊರಬರುವುದು ಹೇಗೆ..ಎಂಬುದನ್ನ್ನು ಕುರುಡ ಕಥೆಯ ಕೊನೆಯಲ್ಲಿ ಚಿತ್ರ ಬಿಡಿಸುತ್ತಾ "ನಿನ್ನಿಂದ ಎಲ್ಲಾ ಸಾಧ್ಯ" ಎಂಬುದನ್ನು ಹೇಳಬಯಸುತ್ತಾನೆ..
"ಕೆಲವು ಮನುಷ್ಯರನ್ನೂ ಬಿಡಿಸು.. ಮನುಷ್ಯರಿಲ್ಲದೆ ಎಂತಹ ಕೆಥೆಡ್ರೆಲ್ ಅದು"
ಮಾನವರಿಲ್ಲದ ಜಾಗ ಎಂತಹ ಜಾಗವಾಗಿದ್ದರೂ ಚೆನ್ನಾಗನಿಸುವುದಿಲ್ಲಾ.. ಏಕಾಂತ ಕೆಲಸಮಯ ಮನಸ್ಸಿಗೆ ಹಿತ ಕೊದಬಹುದು.. ಆದರೆ ಮಾನವ ಸಂಬಂಧ ಸದಾ ಖುಷಿ ಕೊಡುವ ಕ್ರಿಯೆ.. ವಿಶ್ವಾಸ ನಂಬಿಕೆಗಳ ಮೇಳೆಯೇ ನಿಂತಿರುವ ನಮ್ಮ ಮೌಲ್ಯಗಳಿಗೆ ಪೂರಕವಾಗಿದೆ ಈ ವಾಕ್ಯ...
ಬಾಳಿಗರ ಸಾಹಿತ್ಯದ ಶೈಲಿ ಸ್ವಲ್ಪ ಹೊಸದಾಗಿತ್ತು...ಅನುವಾದವನ್ನು ಸಮರ್ಥವಾಗಿ ನಿಭಾಯಿಸಿದ್ದೀರಿ.. ಅಭಿನಂದನೆಗಳು...
Saturday, December 27, 2008
ನವಿಲು ಗರಿ
ನವಿಲು ಗರಿ ಎಷ್ಟು ಚಂದ..ಚಿನ್ನದ ಫಲಕವೊಂದಕ್ಕೆ ಕಪ್ಪು ಹಸಿರು ನೀಲಿ ಬಣ್ಣಗಳನ್ನು ಬಡಿದಂತಿದೆ...
ಪ್ರಿಯೆಯ ಕಣ್ಣಿನಷ್ಟೇ ಕಾಂತಿ ಅವಕ್ಕೆ.. ಕಣ್ಣುಗಳು ನರ್ತಿಸುತ್ತವೆ.. ಸೋನೆ ಮಳೆಗೆ ಬಣ್ಣ ಹಚ್ಚುತ್ತವೆ...
ಅದು ಅವನ ಕುಂಚ... ಎಲ್ಲಾ ಬಣ್ಣಗಳನ್ನು ಒಟ್ಟೀಗೆ ಸೇರಿಸಿ ಬಳಿಯಲು ಹೊರತವ ಮರೆತು, ಬಣ್ಣಗಳು ಒಣಗಿವೆ..
ಅವು ಕೊಳಲಿನ ರಂಧ್ರಗಳು.. ಒಂದೊಂದು ಒಂದೊಂದು ರಾಗವಾಗಿ ವಾಯುತರಂಗದಲ್ಲಿ ತೇಲುತ್ತವೆ..
Friday, December 26, 2008
ಮತ್ತೊಂದಿಷ್ಟು ವಾಕ್ಯಗಳು.. ಕಥೆಗಳು...
ಪರೀಕ್ಷೆಯಲ್ಲಿ ಫೇಲಾದೆನೆಂದು ಗುಡ್ಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳಲು ಹೊರಟ ಅವನಿಗೆ ಬೆಟ್ಟ ಹತ್ತುವುದೇ ಕಷ್ಟವಾಗಿ ವಾಪಾಸು ಮನೆಗೆ ಮರಳಿದ...
ಪತ್ರದ ಮೂಲಕವೇ ನಡೆಯುತ್ತಿದ್ದ ಪ್ರೇಮ ವ್ಯವಹಾರ ಎಲ್ಲರಿಗೂ ತಿಳಿಯುತ್ತದೆ ಎಂಬ ಭಯದಿಂದ ಅದನ್ನು ನಿಲ್ಲಿಸಿ ಅವರಿಬ್ಬರೂ ಒಂದು ದಿನ ಮನೆ ಬಿಟ್ಟು ಓಡಿ ಹೋದರು..
ಆಫೀಸಿನ ಕೆಲಸ ಮುಗಿಸಿ ವಾಪಾಸ್ ಬರುತ್ತಿದ್ದವನಿಗೆ ಸಿನಿಮಾಗೆ ಹೋಗಲು ಕಾಯುತ್ತೇನೆ ಎಂದ ಹೆಂಡತಿಯ ನೆನಪಾಗಿ ಮನೆಯ ದಾರಿ ತಪ್ಪಿಹೋಯಿತು...
ಕೈಗೆ ಪೆಟ್ಟು ಬಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸುತ್ತಿದ್ದ ಅಂಬುಲೆನ್ಸ್ ಅಪಘಾತಕ್ಕೀಡಾದುದರಿಂದ ರೋಗಿಯೂ ಸೇರಿದಂತೆ ಮೂವರು ಮೃತಪಟ್ಟಿದ್ದಾರೆ...
ಗಂಡನ ಕಾಟದಿಂದ ಕಣ್ಣಿರಲ್ಲೇ ಮೀಯುತ್ತಿಇರುವ ಸೊಸೆಯ ಕಷ್ಟ ನೋಡಲಾಗದೆ ಅತ್ತೆ ಒಂದು ದಿನ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದಳು...
ಸಾಹುಕಾರರಿಗೆ ಬಾಕಿ ಕೊಡಬೇಕಿದ್ದ ಸಾಲಕ್ಕೆ ಪ್ರತಿಯಾಗಿ ಜೀತ ಮಾಡಲೊಪ್ಪಿದ ಆತನಿಗೆ ಸಾಹುಕಾರರನ್ನು ಹೊಡೆಯುವ ಶಕ್ತಿ ಕೊನೆವರೆಗೂ ಬರಲೇ ಇಲ್ಲ...
ರಾಷ್ಟ್ರೀಯತೆ ಮತ್ತು ಕೋಮುವಾದ
ಭಾರತ ವಿಶಿಷ್ಟ ಸಂಸ್ಕೃತಿಯ ವಿರಾಟ ರಾಷ್ಟ್ರ.ನಾಗರೀಕತೆಯ ಉಗಮಕಾಲದಿಂದಲೂ ಮನುಷ್ಯನೆಂಬ ಪ್ರಾಣಿಗೆ ನೆಲೆಯಾದ ಪ್ರದೇಶ.ತದನಂತರ ವಲಸೆ ಬಂದವರಿಗೆಲ್ಲರಿಗೂ ಆಶ್ರಯ ನೀಡಿದ ದೇಶ..ಈಗ ವಿವಿಧತೆಯಲ್ಲಿ ಏಕತೆಯನ್ನು ಮೆರೆಯುತ್ತಿರುವ ಗಣರಾಜ್ಯ..ಸಕಲ ಧರ್ಮ, ಭಾಷೆ ,ಸಂಸ್ಕೃತಿ, ಆಹಾರ ವೈಚಿತ್ರ್ಯಗಳಿಗೆ ಸಾಕ್ಷಿಯಾಗಿರುವ ನಾಡಿನಲ್ಲಿರುವ ಸಾಮಾನ್ಯನಿಗೂ ಇದು ನಮ್ಮ ದೇಶ ಎಂದು ಹೇಳಿಕೊಳ್ಳುವುದು ಹೆಮ್ಮೆಯ ಸಂಗತಿ..ಆದರೆ ಯಾವ ಕಾರಣಕ್ಕೆ ಈ ರಾಷ್ಟ್ರೀಯತೆಯ ಭಾವನೆ ಅಂಕುರಿಸಿತೋ ಅದೇ ಆಧಾರದ ಮೇಲೆ ಕೋಮುವಾದ ಹುಟ್ಟಿರುವುದು ವಿಚಿತ್ರ ವಿಚಾರ.
ಇತಿಹಾಸದ ಪುಟಗಳನ್ನು ಹಿಂತಿರುವುದಾಗ ಸ್ವತಂತ್ರ ಭಾರತದ ಪರಿಚ್ಛೇದದಲ್ಲಿ ಮೊದಲ ಸಾಲಿನಲ್ಲಿರುವುದು ಧರ್ಮದ ಆದಾರದ ಮೇಲೆ ಭಿನ್ನ ಗಣರಾಜ್ಯಗಳನ್ನಗಿಸಿದ್ದು. ನಂತರದ ಭಾಷೆಯಾಧಾರದ ಮೇಲೆ ಮತ್ತೆ ರಾಜ್ಯಗಳಾಗಿ ವಿಭಾಗಿಸಿದ್ದು. ಈ ರೀತಿ ಜನರನ್ನು, ಪರಿಸರವನ್ನು ಹಾಗೂ ಅವರ ವಿಚಾರಗಳನ್ನು ಪ್ರತ್ಯೇಕ ಮಾಡಿದ್ದೇ ಇಂದಿನ ಕೋಮುವಾದಕ್ಕೆ ನಾಂದಿಯಾಗಿದೆ ಎಂದರೆ ತಪ್ಪಾಗಲಾರದು. ಕೋಮುವಾದ ಕೇವಲ ವಾದವಾಗಿರದೆ ಯುದ್ಧಕ್ಕೆ ತಿರುಗಿ ರಾಷ್ಟ್ರೀಯ ಐಕ್ಯತೆಗೆ ಧಕ್ಕೆ ತರುತ್ತಿರುವುದು ಕಳವಳಕ್ಕೆ ಕಾರಣ. ಭಾರತದ ಸಂವಿಧಾನದಲ್ಲಿ 'ಸೆಕ್ಯುಲಾರ್' ಎಂಬ ಪದ ಸೇರಿಸಿದ ಮಾತ್ರಕ್ಕೆ ಪ್ರಜೆಗಳ ಮನದಲ್ಲಿ ಬೇರೂರಿದ ಕೋಮುವಾದದ ಭಾವನೆಯನ್ನು ಕಿತ್ತು ರಾಷ್ಟ್ರೀಯತೆಯ ಬೀಜ ಬಿತ್ತುವುದು ಕಷ್ಟ.
ಭಾರತದ ಯಾವುದೋ ರಾಜ್ಯದ ಮೂಲೆಯೊಂದರಲ್ಲಿ ಮಗುವೊಂದು ಹುಟ್ಟಿದರೆ ಜನನ ಪತ್ರದಲ್ಲಿ ಮಗುವಿನ ಜಾತಿ ನಮೂದಿಸಬೇಕು..ಭಾಷೆ ನಮೂದಿಸಬೇಕು.. ಹೀಗೆ ಹುಟ್ಟಿನಿಂದಲೇ ಗುಂಪುಗಾರಿಕೆ ಪ್ರಾರಂಭವಾಗುತ್ತದೆ.ಮಗು ಬೆಳೆಯುತ್ತಿದ್ದಂತೆ ತಾನು,ತನ್ನ ಕುಟುಂಬ,ತನ್ನ ಊರು,ತನ್ನ ಜಾತಿ,ತನ್ನ ಭಾಷೆ ಎಂಬ ಭಾವನೆಯೂ ಬೆಳೆಯುತ್ತದೆ.ಇದನ್ನೇ ತನ್ನತನ ಎಂದು ಭಾವಿಸುವ ಜನರಿಗೆ ಸಮಾಜವೂ ಪುಷ್ಟಿ ನೀಡುತ್ತದೆ. ಜೀವನದ ಪ್ರತಿ ಘಟ್ಟದಲ್ಲೂ ಒಂದಲ್ಲಾ ಒಂದು ಕಾರಣಕ್ಕೆ ಪ್ರತಿಯೊಬ್ಬನೂ ಕೋಮುಭಾವನೆಯನ್ನು ಪ್ರದರ್ಶಿಸುತ್ತಾನೆ. ಹಾಗಿದೆ ನಮ್ಮ ಸಮಾಜ.
ಅದರ ಪರಿಣಾಮ...? 1984 ರಲ್ಲಿ ಸಿಖ್ ಸಮುದಾಯ ದಂಗೆಯೆುದ್ದಿದ್ದು...1992 ರಲ್ಲಿ ಬಾಬ್ರಿ ಮಸೀದಿ ವಿಚಾರ ...1993 ರಲ್ಲಿನ ಮುಂಬಯಿ ಸ್ಫೋಟ...ಇತ್ತೀಚಿನ ಗೋದ್ರಾ ಹತ್ಯಾಕಾಂಡ... ಇನ್ನೂ ಮನಪಟಲದಿಂದ ಮಾಸಿಲ್ಲ.. ಭಾರತ ತನ್ನೆರಡು ಪ್ರಧಾನಿಗಳನ್ನು ಕಳೆದುಕೊಂಡಿದ್ದೂ ಈ ವಿಚಾರಕ್ಕೇ... ಪ್ರತ್ಯೇಕ ರಾಜ್ಯ ಬೇಕೆಂಬ ಕೂಗು ಇನ್ನೂ ಕೇಳಿ ಬರುತ್ತಿದೆ. ಇತ್ತೀಚಿನ ಕನರ್ಾಟಕದಲ್ಲಿ ನಡೆಯುತ್ತಿರುವ ಕ್ರೈಸ್ತ ದೇವಾಲಯಗಳ ಮೇಲಿನ ದಾಳಿ ಇನ್ನೆಲ್ಲಿಗೆ ಕೊಂಡೊಯ್ಯುತ್ತದೆಯೋ ತಿಳಿಯದು.. ವಸುಧೈವ ಕುಟುಂಬಕಂ ಎಂದು ಪುರಾಣಗಳಲ್ಲಿ ಸಾರಿ ಪ್ರಪಂಚಕ್ಕೇ ಮಾದರಿಯಾದ ರಾಷ್ಟ್ರವೊಂದು ಕೋಮುವಾದ ಗರಗಸಕ್ಕೆ ಸಿಕ್ಕಿ ಚೂರಾಗುತ್ತಿದೆ ಎಂದರೆ ಆಶ್ಚರ್ಯವಾಗುವುದು ಸಹಜ.
ಕೋಮುವಾದ ರಾಷ್ಟ್ರೀಯತೆಗೆ ಹೇಗೆ ಧಕ್ಕೆ ತರುತ್ತದೆ..? ಇದೆಂಥಾ ಪ್ರಶ್ನೆ.. ಎರಡು ವಿರುದ್ಧ ಪದಗಳು ಧಕ್ಕೆ ತರದೆ ಇನ್ನೇನು ಮಾಡುತ್ತವೆ? ಕೋಮುವಾದ ಜನರ ಮನಸ್ಸನ್ನು ವಿಭಜಿಸುವ ಭಾವ. ರಾಷ್ಟ್ರೀಯತೆ ಮನಗಳನ್ನು ಒಗ್ಗೂಡಿಸುವ ಭಾವ. ಕೋಮುವಾದ ಸಮಾಜದಲ್ಲಿ ಬಿರುಕನ್ನು ಉಂಟುಮಾಡುತ್ತಾ ದೇಶವೊಂದರ ಅಂತರ್ಕಲಹಕ್ಕೆ ಮುನ್ನುಡಿ ಬರೆಯುತ್ತದೆ. ದೇಶಕ್ಕೆ ಆಂತರಿಕ ಅಭದ್ರತೆಗಿಂತ ಹೆಚ್ಚಿನ ಅಪಾಯದ ಸ್ಥಿತಿ ಇನ್ನೊಂದಿಲ್ಲ..ಹೀಗೆ ಮುಂದುವರಿದರೆ ಈ ಕೋಮುವಾದ ದೇಶವನ್ನೇ ವಿಭಜಿಸುವ.. ಹೊಸರಾಷ್ಟ್ರವನ್ನೇ ಹುಟ್ಟುಹಾಕುವಂತಹ ಗಂಭೀರ ಪರಿಸ್ಥಿತಿಗೆ ಕೊಂಡೊಯ್ಯುಬಹುದು..ನಾವು ಎಚ್ಚರವಹಿಸಬೇಕಷ್ಟೆ...
ರಾಷ್ಟ್ರವೊಂದು ಬಲವಾಗಿರಬೇಕಾದರೆ ಅದರ ಪ್ರತಿಯೊಂದು ಘಟಕವೂ ಸರಿಯಾಗಿರಬೇಕು. ಭಾರತದಂತಹ ಪ್ರಜಾರಾಜ್ಯದಲ್ಲಿ ಪ್ರಜೆಗಳೇ ಪ್ರಭುಗಳಾಗಿರುವಾಗ ಕೋಮುವಾದವನ್ನು ಹತ್ತಿಕ್ಕುವುದು... ರಾಷ್ಟೀಯತೆಯನ್ನು ಬೆಳೆಸುವುದು ಜನರ ಕೈಯಲ್ಲೇ ಇದೆ. ಕವಿ ಕುವೆಂಪು ಹೇಳಿದಂತೆ ಗುಂಪುಗಾರಿಕೆ ಬಿಟ್ಟು ಚೇತನಗಳೆಲ್ಲ ಅನಿಕೇತನಗಳಾಗಬೇಕು. ಭಾಷೆಯಾವುದಾದರೇನು ವೇಷಯಾವುದಾದರೇನು ದೇಶ ಒಂದು ಎಂಬ ಭಾವನೆ ಎಲ್ಲರಲ್ಲಿ ಬಂದಾಗ ಕೋಮುವಾದ ಅದೃಶ್ಯವಾಗುವುದರಲ್ಲಿ ಸಂದೇಹವಿಲ್ಲ. ಅದೇ ರಾಷ್ಟ್ರೀಯತೆಯ ಭಾವನೆಯಲ್ಲವೇ?
Thursday, December 25, 2008
ವಾಕ್ಯವೊಂದರ ಕಥೆಗಳು
ರಸ್ತೆ ಬದಿಯ ಮನೆಯ ಬಾಗಿಲಲ್ಲಿ ನಿಂತು ಕಾಯುತ್ತಿದ್ದ ಅವಳ ಮಗು ಒಳಗಡೆ ಅಳದೆ, ದಿನದಂತೆ ಇಂದೂ ಬರುವ ಹೊಸ ಅಪ್ಪನ ನಿರೀಕ್ಷೆಯಲ್ಲೇ ನಿದ್ದೆ ಮಾಡಿತ್ತು...
ಅಪ್ಪನ ಆರೋಗ್ಯ ಸರಿ ಇಲ್ಲ ಎಂದು ಅಮೆರಿಕಾದಿಂದ ಡಾಲರ್ ಸಮೇತ ಬಂದ ಮಗನಿಗೆ ಭಾರತದ ಹವೆ ಸರಿಹೋಗದ ಕಾರಣ ಆಸ್ಪತ್ರೆಗೆ ಸೇರಿಸಬೇಕಾಯಿತು...
ಪ್ರೀತಿ ಪ್ರೀತಿ ಎಂದು ಕನವರಿಸುತ್ತಲೇ ಇದ್ದ ಪ್ರೇಮಿ ಕೊನೆಗೊಂದು ದಿನ ಪ್ರೀತಿ ಅವನೆದುರಿಗೆ ಬಂದು ನಿಂತಾಗ ಮಾತು ನಿಲ್ಲಿಸಿಬಿಟ್ಟು ಮೂಕನಾದ...
ದಿನವೂ ಬಾತ್ರೂಂಗಾಗಿ ಕ್ಯೂ ನಿಂತು ನಿಂತು ಬೇಸತ್ತ ಹಾಸ್ಟೆಲ್ ಹುಡುಗ ಅಂದು ಮುಂಜಾನೆ ಬೇಗ ಎದ್ದು ಬಾತ್ರೂಂ ಬಳಿ ಕ್ಯೂ ಇಲ್ಲದುದ್ದನ್ನು ನೋಡಿ ವಾಪಾಸ್ ಬಂದು ಮುಸುಕೆಳೆದುಕೊಂಡ...
ಗಿಟಾರ್ ಕಲಿಯುತ್ತೆನೆಂದು ಅಪ್ಪನ ಬಳಿ ಹಣ ಕೇಳಿದ ಮಗನಿಗೆ ಅಪ್ಪ ಹಣ ಕೊಟ್ಟು ತೋಟಕ್ಕೆ ತಂತಿ ಬೇಲಿ ಹಾಕಲು ತಂತಿ ತರುವಂತೆ ಹೇಳಿದ..
ಮೂರುವರ್ಷಗಳಿಂದ ಜೊತೆಗಿದ್ದ, ಪ್ರೀತಿಸಿದ ಹುಡುಗಿಗೆ ಮಾತು ಬರುತ್ತಿಲ್ಲ ಎಂದು ತಿಳಿದ ಮೇಲೆ ಕೈಕೊಟ್ಟ ಹುಡುಗನಿಗೆ ಕಿವಿಯೇ ಕೇಳುತ್ತಿರಲಿಲ್ಲ...
ನಮ್ಮ ಮನೆಯ ಗೋಡೆಯ ಮೇಲಿರುವ ಗೋಲಾಕಾರದ ಗಡಿಯಾರದ ಮುಳ್ಳುಗಳು ಒಬ್ಬರನ್ನೊಬ್ಬರು ಅಗಲಿರಲಾರದೆ ತಾಸಿಗೊಮ್ಮೆ ಒಂದುಗೂಡುತ್ತವೆ...
Wednesday, December 17, 2008
ಅನಾಥ ಸೋಲು
ಗೆಲ್ಲುವುದು ಸುಲಭವಲ್ಲ.. ಗೆದ್ದಮೇಲೆ ಅದನ್ನು ಅರಗಿಸಿಕೊಲ್ಲುವುದೂ ಸುಲಭವಲ್ಲ.. ಸೋಲುವುದು ಸುಲಭ.. ಆದರೆ ಸೋತದ್ದನ್ನು ಅರಗಿಸಿಕೊಳ್ಳುವುದು ಸುಲಭವಲ್ಲ.. ಹೀಗಾಗಿ ಸೋಲಿಗೂ ಗೆಲುವಿಗೂ ಜಾಸ್ತಿ ವ್ಯತ್ಯಾಸವಿಲ್ಲಾ.. ಗೆದ್ದರೆಂದ ಮಾತ್ರಕ್ಕೆ ಅದು ಗೆಲುವಲ್ಲ .. ಸೋತರೆಂದ ಮಾತ್ರಕ್ಕೆ ಸೋಲಲ್ಲ.. ಗೆದ್ದು ಸೋತವರಿರುತ್ತಾರೆ.. ಸೋತು ಗೆದ್ದವರಿರುತ್ತಾರೆ.. ಸೋಲನ್ನು ಗೆಲುವೆಂದು ತಿಳಿದವರಿರುತ್ತಾರೆ.. ಸೋಲನ್ನೇ ಗೆಲುವಿನ ಸೋಪಾನವಾಗಿಸಿಕೊಂಡವರಿರುತ್ತಾರೆ..
ತನ್ನ ಸೋಲಿನಿಂದ ಪಾಠ ಕಲಿತವ ಬುದ್ಧಿವಂತನಾದರೆ ಇತರರ ಸೋಲಿನಿಂದ ಪಾಠ ಕಲಿತವ ಮಹಾಬುದ್ಧಿವಂತ.. ಗೆಲುವು ಅದರ ತಂದೆ ತಾಯಿಗಳನ್ನು ತಾನೆ ಹುಟ್ಟಿಹಾಕಿ ಕೊಳ್ಳುತ್ತದೆ... ಆದರೆ ಸೋಲು ಅನಾಥ.. ಸೋಲಿಗೂ ತಂದೆ ತಾಯಿಗಳಾಗಿ.. ಸೋತವರ ಬೆನ್ನು ತಟ್ಟಿ.. ಸೋಲಿಗೊಂದು ಅರ್ಥ ಕೊಡಿ..
Wednesday, December 10, 2008
ನೋಟ.. ಕಾಟ.. ತೋಟ..
Tuesday, December 9, 2008
ಇರಿತ
ಪ್ರಿತಿಯಿದ್ದರೆ...ಮತ್ಯಾಕೆ ನನ್ನೆದೆಗೆ ಆ ಕಣ್ಣಿನಿಂದ ಹಾಗೆ ಇರಿದೆ...?
ಅವನೂ ಅವಳೂ ಹೀಗಿದ್ದರು ...
ಇಬ್ಬರೂ ಅಳುತ್ತಾರೆ...
ಮಣ್ಣಿನಲ್ಲಿ ಇಬ್ಬರೂ ಆಡುತ್ತಾರೆ... ಮೈಗೆಲ್ಲಾ ಮಣ್ಣು ಮೆತ್ತಿಕೊಳ್ಳುತ್ತಾರೆ...
ಆಟ ಮುಂದುವರಿಯುತ್ತದೆ ...
ಕಾಲೇಜಿನಲ್ಲಿ ಅವಳು ಚಿಗರೆಯಂತೆ ಓಡಾಡುತ್ತಾಳೆ... ಆತ ಪ್ರೀತಿಸುತ್ತಾನೆ...
ಅವಳು ಒಪ್ಪುತ್ತಾಳೆ...
ಆತನಿಗೆ ಸಾಕೆನಿಸುತ್ತದೆ ... ಅವಳನ್ನು ನಿರಾಕರಿಸುತ್ತಾನೆ...
ಅವಳೊಬ್ಬಳೇ ಅಳುತ್ತಾಳೆ...
ಅವನ ಮನಸ್ಸಿಗೆ ವಯಸ್ಸಾಗುತ್ತದೆ... ಕ್ಷಮೆ ಕೇಳುತ್ತಾನೆ...
ಅವಳೆದುರು ಅಳುತ್ತಾನೆ...
'ಒಂದಾಗೋಣ ಬಾ..' ಎನ್ನುತ್ತಾನೆ... 'ಕ್ಷಮಿಸಿದ್ದೇನೆ ಹೋಗು'... ಎನ್ನುತ್ತಾಳೆ...
ಮತ್ತೆ ಅವನೇ ಅಳುತ್ತಾನೆ...
ಅವನಿಗೆ 'ಅಯ್ಯೋ' ಎನ್ನುತ್ತಾರೆ ... ಆಕೆಗೆ 'ಛಿ...' ಎನ್ನುತ್ತಾರೆ...
ಅಲ್ಲಿಗೆ ಜೀವನದ ಕಥೆ ಮುಗಿದಿರುತ್ತದೆ...
Saturday, December 6, 2008
ಸಮಾಜ ಪರಿಚಯ
ಸಮಾಜ ಕನ್ನಡಿ ಇದ್ದ ಹಾಗೆ.. ನಮ್ಮನ್ನು ನಾವು ಕಂಡುಕೊಳ್ಳಲು ಸಮಾಜದ ಎದುರು ಹೋಗಿ ನಿಲ್ಲಬೇಕು.. ಹಗಲಿನ ಸಮಯದಲ್ಲಿ...
Tuesday, December 2, 2008
ಪರಿಕಲ್ಪನೆ
ಜಾಸ್ತಿ ಆಯ್ತು... ಮತ್ತೆ ಬರೆಯುತ್ತೇನೆ...